ಬೆಂಗಳೂರು: ಬೇಸಿಗೆ ರಜೆ ಅಂತ್ಯವಾಗಿ ರಾಜ್ಯದಲ್ಲಿ ಶಾಲೆಗಳು ಪುನಾರಂಭ ಆಗಲಿವೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಸ್ವಚ್ಚತಾ ಕಾರ್ಯ ಆರಂಭವಾಗಿದೆ.
ಶಿಕ್ಷಣ ಇಲಾಖೆ ಶಾಲೆಗಳೀಗೆ ತಳಿರು- ತೋರಣ ಕಟ್ಟಿ ಮಕ್ಕಳಿಗೆ ಹೂ ಸಿಹಿ ನೀಡಿ ಸ್ವಾಗತ ಭರ್ಜರಿ ತಯಾರಿ ನಡೆಸಿದೆ. ಮೇ-31ರಿಂದ ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪುನಾರಂಭಗೊಳ್ಳಲಿದ್ದು ಇಂದು- ನಾಳೆ ಶಾಲೆಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ, ಪ್ರಾರಂಭೋತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಶೇ.95ರಷ್ಟು ಪಠ್ಯಪುಸ್ತಕ-ಸಮವಸ್ತ್ರಗಳ ಪೂರೈಕೆ
ಏ.11ರಿಂದ ಮೇ 28ರವರೆಗೆ ರಾಜ್ಯಾದ್ಯಂತ ಶಾಲೆಗಳಿಗೆ ಸುಮಾರು ಎರಡು ತಿಂಗಳ ಬೇಸಿಗೆ ರಜೆ ನೀಡಲಾಗಿತ್ತು. ಇದೀಗ ರಜೆ ಮುಕ್ತಾಯಗೊಂಡಿದ್ದು ಪ್ರತಿ ತರಗತಿ ಕೊಠಡಿ, ಆವರಣ, ಆಟದ ಮೈದಾನ, ಲೈಬ್ರರಿ ಸೇರಿದಂತೆ ಇಡೀ ಶಾಲೆಯನ್ನು ಸರಿಪಡಿಸಲು ತಯಾರಿ ನಡೆಸಲಾಗುತ್ತಿದ್ದು ಈಗಾಗಲೇ ಪಠ್ಯಪುಸ್ತಕ-ಸಮವಸ್ತ್ರಗಳನ್ನು ಶೇ.95ರಷ್ಟು ಪೂರೈಕೆ ಮಾಡಲಾಗಿದೆ.
ಮೊದಲ ಬಿಸಿಯೂಟದಲ್ಲಿ ಸಿಹಿ ಕಡ್ಡಾಯ!
ಈ ಬಾರಿ ಇಲಾಖೆ ಹೆಚ್ಚಿನ ಮುತುವರ್ಜಿವಹಿಸಿ ಶಾಲೆ ಆರಂಭದ ಮೊದಲ ದಿನವೇ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ವಿದ್ಯಾರ್ಥಿಗಳಿಗೆ ನೀಡಲಿದೆ. ನಾಡಿದ್ದು ಬಿಸಿಯೂಟದಲ್ಲಿ ಒಂದು ಸಿಹಿ ತಿಂಡಿ ತಯಾರಿಸಿ ಮಕ್ಕಳನ್ನು ಶಿಕ್ಷಕರು ಬರಮಾಡಿಕೊಳ್ಳದಿದ್ದಾರೆ.
ಇನ್ನು ಶಾಲೆಯಿಂದ ದೂರ ಉಳಿದ ಮಕ್ಕಳು ವಾಪಸ್ ಬರುವಂತೆ ಜಾಗೃತಿ ಮೂಡಿಸಲು ತಯಾರಿ ನಡೆಸಲಾಗುತ್ತಿದ್ದು ಶಾಲೆಯ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಜಾಥಾ ನಡೆಸಲಾಗುತ್ತಿದೆ.
ನಾನಾ ರೀತಿಯ ಜಾಗೃತಿ ಕಾರ್ಯಕ್ರಮ!
ಶಾಲೆಗೆ ಬಾರದ ಮಕ್ಕಳು, ಅರ್ಧಕ್ಕೆ ಶಾಲೆ ಬಿಟ್ಟ ಮಕ್ಕಳ ಕರೆ ತರುವ ಪ್ರಯತ್ನ ಮಾಡಲಾಗುತ್ತಿದ್ದು ಈ ಬಗ್ಗೆ ಗ್ರಾಮಗಳಲ್ಲಿ ಜಾಥಾ ಮಾಡಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ.
ಪ್ರತೀ ಶಾಲೆಯಲ್ಲಿ ಕೂಡ ಕಡ್ಡಾಯ SDMC ಸಭೆ ನಡೆಸಿ ಮಕ್ಕಳ ವೆಲ್ಕಮ್ ಮಾಡಲು ಯೋಜನೆ ರೂಪಿಸಲು ಸೂಚನೆ ನೀಡಲಾಗಿದ್ದು ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿಗೆ ಈಗಾಗಲೇ ವಿಶೇಷ ಆಂದೋಲನ ಶುರುವಾಗಿದೆ. ಇದರ ಅಡಿಯಲ್ಲಿ ಶಿಕ್ಷಕರು ಮನೆ ಮನೆಗೆ ಭೇಟಿ ನೀಡಿ ನಿಗದಿತ ವಯೋಮಾನದ ಮಕ್ಕಳು ಹಾಗೂ ಪಾಲಕರನ್ನು ಮನವೊಲಿಸಿ ಶಾಲೆಗೆ ದಾಖಲಿಸಬೇಕು.
ಶಾಲೆ ಬಿಟ್ಟ ಮಕ್ಕಳು ಇದ್ದರೆ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ಪಡೆದು ಮರಳಿ ಶಾಲೆಗೆ ದಾಖಲಿಸಿ ಮುಖ್ಯವಾಹಿನಿಗೆ ತರಬೇಕು. ಸರ್ಕಾರದಿಂದ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳ ಕುರಿತು ಕರಪತ್ರ, ಬ್ಯಾನರ್, ಫ್ಲೆಕ್ಸ್ಗಳನ್ನು ನೀಡುವ ಮೂಲಕ ಮನವೊಲಿಕೆ ನಡೆಸಲು ಚಿಂತಿಸಲಾಗುತ್ತಿದ್ದು ದಿನಪತ್ರಿಕೆ, ರೇಡಿಯೋ, ಸಮೂಹ ಮಾಧ್ಯಮದ ಮೂಲಕ ಶಾಲಾ ಆರಂಭದ ಕುರಿತು ಮಾಹಿತಿ ಪ್ರಸಾರವನ್ನೂ ಆಯೋಜಿಸಲಾಗಿದೆ.
ಈ ಬಗ್ಗೆ ಆಯಾ ಶಾಲೆಗಳಿಗೆ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚನೆ ಹೊರಡಿಸಿದೆ.