ಚೆನ್ನೈ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ (ಎಬಿವಿಪಿ) ರಾಷ್ಟ್ರೀಯ ಅಧ್ಯಕ್ಷ ಡಾ. ಸುಬ್ಬಯ್ಯ ಷಣ್ಮುಗಂ ವಿರುದ್ಧ ನೀಡಿದ್ದ ದೂರನ್ನು ಮಹಿಳೆ ವಾಪಸ್ ಪಡೆದಿದ್ದಾರೆ.
ಷಣ್ಮುಗಂ ಅವರು ಪಾರ್ಕಿಂಗ್ ವಿಚಾರಕ್ಕೆ ನಮ್ಮೊಂದಿಗೆ ಜಗಳ ತೆಗೆದಿದ್ದಾರೆ. ಮನೆಯ ಬಾಗಿಲಿನ ಬಳಿ ಮೂತ್ರವಿಸರ್ಜನೆ ಮಾಡಿದ್ದಲ್ಲದೆ, ತಾವು ಬಳಸಿದ್ದ ಮಾಸ್ಕ್ನ್ನು ನಮ್ಮ ಮನೆ ಬಳಿ ಎಸೆದಿದ್ದಾರೆ ಎಂದು ಅವರ ಪಕ್ಕದ ಮನೆಯ 62 ವರ್ಷದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಸಿಸಿಟಿವಿ ಫೂಟೇಜ್ನ ಫೋಟೋಗಳನ್ನೂ ಪೊಲೀಸರಿಗೆ ನೀಡಿದ್ದರು.
ಆದರೆ ಇಂದು ತಾವು ನೀಡಿದ ದೂರನ್ನು ಮಹಿಳೆ ವಾಪಸ್ ಪಡೆದಿದ್ದಾರೆ. ಷಣ್ಮುಗಂ ಅವರು ನಮ್ಮ ಬಳಿ ಕ್ಷಮೆ ಕೇಳಿದ್ದಾರೆ. ಅಲ್ಲದೆ, ನಮ್ಮ ಕಟ್ಟಡದಲ್ಲಿದ್ದ ಅನೇಕರು ಬಂದು, ಈ ವಿಷಯವನ್ನು ಇಲ್ಲಿಗೇ ಬಿಟ್ಟು ಬಿಡಿ. ಮುಂದುವರಿಸಬೇಡಿ ಎಂದು ನಮಗೇ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ದೂರು ಹಿಂಪಡೆಯುತ್ತೇನೆ ಎಂದು ಮಹಿಳೆ ತಿಳಿಸಿದ್ದಾರೆ.
ಮಹಿಳೆ ದೂರು ಹಿಂಪಡೆಯುವುದಾಗಿ ಬರೆದುಕೊಟ್ಟಿದ್ದಾರೆ. ಆದರೆ ನಾವು ಎಫ್ಐಆರ್ ದಾಖಲಿಸಿಯಾಗಿದ್ದು, ತನಿಖೆ ಮುಂದುವರಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ₹100 ಲಂಚ ಕೊಡದ ಹುಡುಗನಿಗೆ ಸಿಕ್ಕಿತು ಮನೆ, ಉಚಿತ ಶಿಕ್ಷಣ!
ಮಹಿಳೆ ದೂರು ಕೊಟ್ಟರೂ ಪೊಲೀಸರು ಸುಮ್ಮನಿದ್ದರು. ಆದರೆ ಮಹಿಳೆಯ ಸಂಬಂಧಿಯೋರ್ವ ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಬಳಿಕ ಅಪಾರ ಖಂಡನೆ ವ್ಯಕ್ತವಾಗಿತ್ತು. ಹಾಗಾಗಿ ಜುಲೈ 25ರಂದು ಪೊಲೀಸರು ಷಣ್ಮುಗಂ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಡಾ. ಸುಬ್ಬಯ್ಯ ಈ ಆರೋಪವನ್ನು ತಳ್ಳಿ ಹಾಕಿದ್ದರು. ನಾನು ಯಾವತ್ತೂ ಅಲ್ಲಿಗೆ ಕಸ ಎಸೆದಿಲ್ಲ…ಮೂತ್ರ ವಿಸರ್ಜನೆಯನ್ನೂ ಮಾಡಿಲ್ಲ. ಸಿಸಿಟಿವಿ ಫೂಟೇಜ್ನ ಫೋಟೋಗಳು ಎಡಿಟ್ ಮಾಡಿದವುಗಳು ಎಂದು ಹೇಳಿದ್ದರು. ಸುಬ್ಬಯ್ಯ ಅವರಿಗೆ ಅಪಕೀರ್ತಿ ತರಲು ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಎಬಿವಿಪಿ ಕಾರ್ಯದರ್ಶಿ ಹೇಳಿದ್ದರು. (ಏಜೆನ್ಸೀಸ್)