ತುಮಕೂರು: ಜಿಲ್ಲೆಯಲ್ಲಿ ನರಭಕ್ಷಕ ಚಿರತೆ ದಾಳಿ ಮುಂದುವರಿದಿದ್ದು, ಮತ್ತೊಬ್ಬ ಮಹಿಳೆ ಬಲಿಯಾಗಿದ್ದಾರೆ.
ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯ ಮಣಿಕುಪ್ಪೆ ಗ್ರಾಮದ ಭಾಗ್ಯಮ್ಮ (35) ಗುರುವಾರ ಮಣಿಕುಪ್ಪೆಗೆ ಹೊಂದಿಕೊಂಡ ಕುಣಿಗಲ್ ತಾಲೂಕು ಕಟ್ಟೆಪಾಳ್ಯದ ಹೊಲದ ಬಳಿ ಹಸು ಮೇಯಿಸುತ್ತಿದ್ದರು. ಮಧ್ಯಾಹ್ನ 2.30ರ ಸುಮಾರಿಗೆ ದಾಳಿ ಮಾಡಿದ ಚಿರತೆ, ಭಾಗ್ಯಮ್ಮರ ದೇಹವನ್ನು ಬೇಲಿ ಸಂದಿಗೆ ಎಳೆದೊಯ್ದು ಬಿಟ್ಟು ಹೋಗಿದೆ. ಇದೇ ಗ್ರಾಮದಲ್ಲಿ ಕೆಲ ತಿಂಗಳ ಹಿಂದೆ 5 ವರ್ಷದ ಬಾಲಕನನ್ನು ಚಿರತೆ ಕೊಂದಿತ್ತು!.
2019ರ ಅಕ್ಟೋಬರ್ನಲ್ಲಿ ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿ ಬನ್ನಿಕುಪ್ಪೆಯಲ್ಲಿ ವೃದ್ಧೆ ಲಕ್ಷ್ಮಮ್ಮ ಚಿರತೆಗೆ ಬಲಿಯಾಗಿದ್ದರು. ಇದಾದ ಬಳಿಕ ಕುಣಿಗಲ್ ತಾಲೂಕಿನ ದೊಡ್ಡಮರಳವಾಡಿಯಲ್ಲಿ ವೃದ್ಧ ಆನಂದಯ್ಯ ಎಂಬುವವರನ್ನೂ ಚಿರತೆ ಕೊಂದಿತ್ತು. ನಂತರ ಸಿ.ಎಸ್.ಪುರ ಹೋಬಳಿ ಮಣಿಕುಪ್ಪೆಯ 5 ವರ್ಷದ ಮಗು ಚಿರಂತನ್ಗೌಡ ಕೂಡ ಚಿರತೆ ದಾಳಿಂದ ಮೃತಪಟ್ಟಿದ್ದ. ಫೆ.29ರಂದು ಹೆಬ್ಬೂರು ಹೋಬಳಿ ಕಣಕುಪ್ಪೆ ಗ್ರಾಪಂ ವ್ಯಾಪ್ತಿಯ ಬೈಚನಹಳ್ಳಿಯ ತೋಟದ ಮನೆ ಮುಂಭಾಗ ಅಜ್ಜಿ ಜತೆ ಆಟವಾಡುತ್ತಿದ್ದ 3 ವರ್ಷದ ಚಂದನಾಳನ್ನು ಚಿರತೆ ಕಚ್ಚಿಕೊಂಡು ಹೋಗಿ ಕೊಂದಿತ್ತು. ಇದೀಗ ದನ ಮೇಯಿಸುತ್ತಿದ್ದ ಭಾಗ್ಯಮ್ಮರನ್ನು ಚಿರತೆ ಕೊಂದು ಹಾಕಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ.
ಜಿಲ್ಲೆಯ ತುಮಕೂರು, ಕುಣಿಗಲ್, ಗುಬ್ಬಿ ತಾಲೂಕಿನ ಚಿರತೆ ಬಾಧಿತ ಪ್ರದೇಶಗಳಲ್ಲಿ ಚಿರತೆ ಸೆರೆಹಿಡಿಯುವ ಕಾರ್ಯಾಚರಣೆ ನಡೆಸಲಾಗಿತ್ತು. ನಾಗರಹೊಳೆ, ದುಬಾರೆ ಆನೆ ಶಿಬಿರದಿಂದ ಕೃಷ್ಣ, ಗಣೇಶ, ಧನಂಜಯ, ಪ್ರಶಾಂತ 4 ಆನೆಗಳನ್ನೂ ಈ ಕಾರ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಆದರೆ ಈ ಪ್ರಯತ್ನವೂ ಫಲಕೊಡಲಿಲ್ಲ. ಬಳಿಕ ಡ್ರೋನ್ ಬಳಸಿ ಚಿರತೆ ಪತ್ತೆ ಹಚ್ಚಲು ಅರಣ್ಯ ಇಲಾಖೆ ಒಮ್ಮೆ ಪ್ರಯೋಗಾರ್ಥ ಕಾರ್ಯಾಚರಣೆ ನಡೆಸಿತ್ತು. ಇದೂ ಕೈಗೂಡಲಿಲ್ಲ.