ಮುಂಡರಗಿ: ತಾಲೂಕಿನ ಡೋಣಿ ಗ್ರಾಮದಿಂದ ಕಪ್ಪತಗುಡ್ಡ ಅರಣ್ಯಕ್ಕೆ ತೆರಳುವ ಭಾಗದಲ್ಲಿ ಚಿರತೆ ಸೋಮವಾರ ಚಿರತೆ ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಡೋಣಿಯಿಂದ ಕಪ್ಪತಗುಡ್ಡದ ಗಾಳಿಗುಂಡಿ ಬಸವಣ್ಣ ದೇವಸ್ಥಾನ ಭಾಗಕ್ಕೆ ತೆರಳುವ ಅರಣ್ಯ ಪ್ರದೇಶದಲ್ಲಿ ಗಾಳಿ ವಿದ್ಯುತ್ ಯಂತ್ರದ ಸಿಬ್ಬಂದಿ ಕಾರ್ನಲ್ಲಿ ತೆರಳುತ್ತಿರುವಾಗ ಕಾಣಿಸಿಕೊಂಡ ಚಿರತೆಯನ್ನು ಮೊಬೈಲ್ನಲ್ಲಿ ಸೆರೆ ಹಿಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಡೋಣಿ ಭಾಗದಲ್ಲಿ ಈ ಚಿರತೆ ಪದೇಪದೆ ಜನರಿಗೆ ಕಾಣಿಸಿಕೊಳ್ಳುತ್ತಿದೆ. ಕಪ್ಪತಗುಡ್ಡದ ಅರಣ್ಯ ಪ್ರದೇಶದ ಹಲವು ಭಾಗದಲ್ಲಿ ಆಗಾಗ ಜನರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಆ ಭಾಗದಲ್ಲಿ ಸಂಚರಿಸಲು ಜನರು ಆತಂಕ ಪಡುವಂತಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಆರ್ಎಫ್ಒ ವೀರಣ್ಣ ಮರಿಬಸಣ್ಣವರ ಅವರು, ಡೋಣಿ, ಕಡಕೋಳ, ಹಾರೋಗೇರಿ, ಹೀರೇವಡ್ಡಟ್ಟಿ ಭಾಗದ ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಸುಮಾರು 3ರಿಂದ 4 ಚಿರತೆಗಳು ಇವೆ. ಅರಣ್ಯ ಇಲಾಖೆ ಸಿಬ್ಬಂದಿಗೆ ಆಗಾಗ ಕಾಣಿಸಿಕೊಳ್ಳುತ್ತವೆ. ಹಲವು ವರ್ಷಗಳಿಂದ ಚಿರತೆ ಈ ಭಾಗದಲ್ಲಿದ್ದು ಯಾರಿಗೂ ತೊಂದರೆ ನೀಡಿಲ್ಲ. ಜನರು ಆತಂಕ ಪಡಬೇಕಿಲ್ಲ, ಸುಮ್ಮನೆ ಅರಣ್ಯದೊಳಗಡೆ ಹೋಗಬಾರದು ಎಂದು ತಿಳಿಸಿದರು.