ಬೆಂಗಳೂರು: ಬಿಬಿಎಂಪಿಯಲ್ಲಿ ಮಾರ್ಷಲ್ ನೌಕರಿ ಕೊಡಿಸುವ ನೆಪದಲ್ಲಿ 200ಕ್ಕೂ ಅಧಿಕ ಯುವಕರಿಂದ ಹಣ ಪಡೆದು ಮೋಸ ಮಾಡಿದ್ದ ಆರೋಪಿಯನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.
ಹೊಸಕೋಟೆ ಮೂಲದ ಎಂ. ಹರ್ಷ (30) ಬಂಧಿತ. ಸದ್ಯ ಜೆ.ಪಿ.ನಗರದ ಜಂಬೂ ಸವಾರಿ ದಿಣ್ಣೆ ನೆಲೆಸಿದ್ದ ಹರ್ಷ, ಪಿಯುಸಿ ವ್ಯಾಸಂಗ ಮಾಡಿದ್ದಾರೆ. ಕರೊನಾ ಲಾಕ್ಡೌನ್ ಸಮಯದಲ್ಲಿ ಪಾಲಿಕೆ ಕಂಟ್ರೋಲ್ ರೂಮ್ನಲ್ಲಿ ಗುತ್ತಿಗೆ ಆಧಾರದ ಮೇಲೆ 10 ತಿಂಗಳು ಕಂಪ್ಯೂಟರ್ ಆಪರೇಟರ್ ಆಗಿದ್ದ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಹೊಸಕೋಟೆ ತಾಲ್ಲೂಕು ಲಕ್ಕೊಂಡನಹಳ್ಳಿಯ ಬಿಕಾಂ ವಿದ್ಯಾರ್ಥಿ ಎಲ್. ಸಂದೀಪ್, ನೌಕರಿಗೆ ಸೇರಬೇಕೆಂದು ಹುಡುಕಾಟ ನಡೆಸುತ್ತಿದ್ದಾಗ ಸ್ನೇಹಿತನ ಮೂಲಕ ಹರ್ಷ ಪರಿಚಯವಾಗಿದ್ದ. ಆತನಿಗೆ ಕರೆ ಮಾಡಿದಾಗ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿದ್ದೆನೆ ಎಂದು ಪರಿಚಯ ಮಾಡಿಕೊಂಡಿದ್ದ.
ಜೂನ್ 1ರಂದು ಬಿಬಿಎಂಪಿ ಮುಖ್ಯ ಕಚೇರಿ ಸಮೀಪದ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಸಂದೀಪ್ ಮತ್ತು ಆತನ ಸ್ನೇಹಿತರನ್ನು ಕರೆಸಿಕೊಂಡ ಆರೋಪಿ ಹರ್ಷ, ಪಾಲಿಕೆಯಲ್ಲಿ 90 ಮಾರ್ಷಲ್ ಹುದ್ದೆ ನೇಮಕಾತಿಗೆ ನಡೆಯುತ್ತಿದೆ. ಅರ್ಜಿ ಶುಲ್ಕ 3 ಸಾವಿರ ರೂ. ಕೊಟ್ಟರೇ ನಿಮಗೆ ನೌಕರಿ ಕೊಡಿಸುತ್ತೆನೆ. ಇನ್ನೂ ಯಾರಾದರೂ ವಿದ್ಯಾವಂತ ನಿರುದ್ಯೋಗಿಗಳು ಮತ್ತು ಎನ್ಸಿಸಿ ವಿದ್ಯಾರ್ಥಿಗಳು ಇದ್ದರೆ ಅಂತವರಿಗೆ ನೌಕರಿ ಕೊಡಿಸುವುದಾಗಿ ಆರೋಪಿ ಭರವಸೆ ಕೊಟ್ಟಿದ್ದ.
ಉದ್ಯೋಗದ ಅಗತ್ಯ ಇದ್ದ ಕಾರಣಕ್ಕೆ ಸಂದೀಪ್, ಆರೋಪಿಗೆ 3 ಸಾವಿರ ರೂ. ವರ್ಗಾವಣೆ ಮಾಡಿದ್ದ. ಆನಂತರ ಸ್ನೇಹಿತರು ಮತ್ತು ಸಂಬಂಧಿಕರಿಗೆ ವಿಷಯ ತಿಳಿಸಿ ಒಟ್ಟು 53 ಯುವಕರ ಕಡೆಯಿಂದ ಹಣ ಕೊಡಿಸಿದ್ದ. ಎಲ್ಲರ ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಕಲು ಪ್ರತಿಗಳನ್ನು ಆರೋಪಿ ಸಂಗ್ರಹಿಸಿದ್ದ.
5 ತಿಂಗಳು ಆದರೂ ಯಾವುದೇ ನೌಕರಿ ಕೊಡಿಸಿರಲಿಲ್ಲ. ಆ.7ರಂದು ಎಲ್ಲರ ವಾಟ್ಸ್ಆ್ಯಪ್ಗೆ ನಕಲಿ ಆದೇಶ ಪ್ರತಿಯನ್ನು ಕಳುಹಿಸಿ ನಂಬಿಸಿದ್ದ. ಈ ಬಗ್ಗೆ ಬಿಬಿಎಂಪಿಯಲ್ಲಿ ವಿದ್ಯಾರ್ಥಿಗಳು ವಿಚಾರಿಸಿದಾಗ ನಕಲಿ ಎಂಬುದು ಗೊತ್ತಾಗಿದೆ.
ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಸಂದೀಪ್ ಸೇರಿದಂತೆ 53 ಯುವಕರು ದೂರು ಸಲ್ಲಿಸಿದ್ದರು.