*ಮೀನು ವ್ಯಾಪಾರಕ್ಕೆ ಬಂದಿದ್ದ ವ್ಯಕ್ತಿಗೆ ವಂಚನೆ *ಆರ್.ಆರ್.ನಗರದ ಜವರೇಗೌಡನಗರದಲ್ಲಿ ಕೃತ್ಯ
ಬೆಂಗಳೂರು: ಒಡವೆಗಳನ್ನು ಗಿರವಿ ಇಡಿಸಿ ಹಣ ಕೊಡಿಸುವುದಾಗಿ ಹೇಳಿದ ಯುವಕರಿಬ್ಬರು, 1.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ್ದಾರೆ. ಕಾಸರಗೋಡು ಮೂಲದ ಅಬ್ದುಲ್ಲಾ ವಂಚನೆಗೊಳಗಾದವರು. ಆರೋಪಿಗಳಾದ ತಬ್ರೇಜ್, ರಾಜು ಹಾಗೂ ಮತ್ತೊಬ್ಬನ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಬ್ದುಲ್ಲಾ ಈ ಹಿಂದೆ ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದು, ಕರೊನಾ ಹಿನ್ನೆಲೆಯಲ್ಲಿ ಭಾರತಕ್ಕೆ ವಾಪಸ್ ಬಂದಿದ್ದರು. ಬಾಣಸವಾಡಿಯಲ್ಲಿ ಮೀನು ವ್ಯಾಪಾರ ಮಾಡಲು ನಿರ್ಧರಿಸಿದ್ದರು. ಅದಕ್ಕೆ ಹಣ ಕಡಿಮೆಯಾದ್ದರಿಂದ ಪತ್ನಿಯ ಒಡವೆಗಳನ್ನು ಅಡವಿಟ್ಟು ಹಣ ಹೊಂದಿಸಲು ಮುಂದಾಗಿದ್ದರು. ಈ ಸಂಬಂಧ ಗಿರವಿ ಅಂಗಡಿಗೆ ಹೋಗಿದ್ದಾಗ ಸ್ಥಳೀಯ ಗುರುತಿನ ಚೀಟಿ ನೀಡುವಂತೆ ಅಂಗಡಿಯವರು ಕೇಳಿದ್ದರು.
ಇದನ್ನೂ ಓದಿ: FIRST LOOK: ‘ಸತ್ಯಮೇವ ಜಯತೇ 2’ ಚಿತ್ರಕ್ಕಾಗಿ ದೇಹದ ಆಕಾರವನ್ನೇ ಬದಲಿಸಿದ ಜಾನ್ ಅಬ್ರಹಂ!
ದುಬೈನಲ್ಲಿ ಪರಿಚಯವಾಗಿದ್ದ ಮಂಗಳೂರು ಮೂಲದ ತಬ್ರೇಜ್ಗೆ ಕರೆ ಮಾಡಿದ್ದ ಅಬ್ದುಲ್ಲಾ, ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಪರಿಚಯದವ ಮೂಲಕ 5 ಚಿನ್ನದ ಬಳೆಗಳನ್ನು ಗಿರವಿ ಇಡಿಸಿ ಹಣ ಕೊಡಿಸುವಂತೆ ಕೇಳಿಕೊಂಡಿದ್ದರು. ಈ ವೇಳೆ ತಬ್ರೇಜ್, ರಾಜು ಎಂಬಾತನ ಫೋನ್ ನಂಬರ್ ಕೊಟ್ಟು ಆತನನ್ನು ಸಂರ್ಪಸುವಂತೆ ತಿಳಿಸಿದ್ದ. ರಾಜುಗೆ ಕರೆ ಮಾಡಿದಾಗ ಆತ ರಾಜರಾಜೇಶ್ವರಿನಗರಕ್ಕೆ ಬರುವಂತೆ ಸೂಚಿಸಿ ವ್ಯಾಟ್ಸ್ಆಪ್ಗೆ ಲೊಕೇಷನ್ ಕಳುಹಿಸಿದ್ದ. ಸೆ.14ರಂದು ಬೆಳಗ್ಗೆ 11.30ರಲ್ಲಿ ರಾಜರಾಜೇಶ್ವರಿನಗರದ ಹಲಗೆವಡೇರಹಳ್ಳಿಗೆ ಅಬ್ದುಲ್ಲಾ ಹೋಗಿದ್ದು, ಈ ವೇಳೆ ರಾಜು ತನ್ನ ಸ್ನೇಹಿತನ ಜತೆ ಅಲ್ಲಿಗೆ ಬಂದಿದ್ದ. ಬಳಿಕ ಜವರೇಗೌಡನಗರದಲ್ಲಿರುವ ಜುವೆಲ್ಲರಿ ಮಳಿಗೆಗೆ ರಾಜು ಕರೆದೊಯ್ದು ಚಿನ್ನದ ಬಳೆಗಳನ್ನು ತೆಗೆದುಕೊಂಡು ಮಳಿಗೆ ಒಳಗೆ ಹೋಗಿದ್ದ.
ಇದನ್ನೂ ಓದಿ: ತೋಟ, ಹೊಳೆಗಳಲ್ಲಿ ಉಗ್ರರಿಂದ ಭೂಗತ ಬಂಕರ್ನಿರ್ಮಾಣ! ಸ್ಫೋಟಕ ಮಾಹಿತಿ ಬಹಿರಂಗ
ಐದು ನಿಮಿಷದ ಬಳಿಕ ಮಳಿಗೆಯಿಂದ ಹೊರಬಂದಿದ್ದ ರಾಜು, ನೀನು ಕೊಟ್ಟಿದ್ದ ಬಳೆಗಳನ್ನು ಅಂಗಡಿಯವರಿಗೆ ಕೊಟ್ಟಿದ್ದೇನೆ. ಬ್ಯಾಂಕಿಗೆ ಹೋಗಿ ಹಣ ತಂದು ಕೊಡುವುದಾಗಿ ಹೇಳಿದ್ದಾರೆ ಎಂದಿದ್ದ. ಈ ವೇಳೆ ಚಿನ್ನದ ಬಳೆಗಳು ರಾಜು ಜೇಬಿನಲ್ಲಿರುವುದು ಕಂಡು ಬಂದಿದ್ದು, ಅನುಮಾನದ ಮೇರೆಗೆ ಆತನನ್ನು ಹಿಡಿದುಕೊಳ್ಳಲು ಮುಂದಾದಾಗ ಸ್ಕೂಟರ್ನಲ್ಲಿ ಪರಾರಿಯಾಗಿದ್ದಾರೆ ಎಂದು ಅಬ್ದುಲ್ಲಾ ದೂರಿನಲ್ಲಿ ವಿವರಿಸಿದ್ದಾರೆ. ಈ ಸಂಬಂಧ ಜುವೆಲ್ಲರಿ ಮಳಿಗೆ ಸ್ಥಳದಲ್ಲಿನ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ವಂಚಕರ ಮುಖಚಹರೆ ಸೆರೆಯಾಗಿದ್ದು, ಅದನ್ನು ಆಧರಿಸಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.