ಲಖನೌ: ಉತ್ತರ ಪ್ರದೇಶದ ಸೆರೆಮನೆಗಳಲ್ಲಿರುವ ಕೈದಿಗಳು ಹನುಮಾನ್ ಚಾಲೀಸಾ ಮತ್ತು ಸುಂದರಕಾಂಡ ಪಠಣ ಮಾಡುವ ಹಾಗೂ ವ್ಯಕ್ತಿತ್ವ ವಿಕಸನ ತಂತ್ರಗಳನ್ನು ಕಲಿಯುವ ದಿನಗಳು ಸಮೀಪಿಸಿವೆ. ಯಾವುದೇ ಧಾರ್ಮಿಕ ತಾರತಮ್ಯ, ಅಜೆಂಡಾ ಅಥವಾ ಒತ್ತಡವಿಲ್ಲದೆ ವೈಯಕ್ತಿಕ ಬೆಳವಣಿಗೆಗೆ ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದು ಯೋಜನೆಯ ರೂವಾರಿ ರಾಜ್ಯದ ಬಂದೀಖಾನೆ ಸಚಿವ ಧರ್ಮವೀರ್ ಪ್ರಜಾಪತಿ ಹೇಳಿದ್ದಾರೆ.
ಜನರಿಗೆ ವ್ಯಕ್ತಿತ್ವ ವಿಕಸನದ ಪಾಠಗಳು ಮತ್ತು ಮಂತ್ರಗಳನ್ನು ಕಲಿಸಲು ‘ಭಗವಾನ್ ಹನುಮಾನ್’ಗಿಂತ ಉತ್ತಮ ಗುರು ಬೇರೆ ಯಾರೂ ಇಲ್ಲ ಎಂದು ಪ್ರಜಾಪತಿ ಪ್ರತಿಪಾದಿಸಿದ್ದಾರೆ. ಸಮಾಜದಲ್ಲಿ ಉತ್ತಮ ಜೀವನ ಸಾಗಿಸಲು ಅಮೂಲ್ಯ ಪಾಠಗಳನ್ನು ಕಲಿಯಿರಿ ಎಂದವರು ಕೈದಿಗಳಿಗೆ ಕರೆ ನೀಡಿದ್ದಾರೆ.
ಕೈದಿಗಳ ವ್ಯಕ್ತಿತ್ವವನ್ನು ಉನ್ನತಿಕರಿಸುವುದು ಮಾತ್ರವೇ ಈ ಉಪಕ್ರಮದ ಉದ್ದೇಶವಾಗಿದೆ ಎಂದು ಅಜಂಗಢದ ಜೈಲಿನ ಕೈದಿಗಳೊಂದಿಗೆ ಸಂವಹನ ನಡೆಸುವ ಸಂದರ್ಭದಲ್ಲಿ ಅವರು ಹೇಳಿದರು. ಈ ಯೋಜನೆಯ ಅಂಗವಾಗಿ ರಾಜ್ಯ ಸರ್ಕಾರ, ಹನುಮಾನ್ ಚಾಲೀಸಾ ಪಠಣ ಮಾಡುವ ಆಸಕ್ತಿ ತೋರುವ ಕೈದಿಗಳಿಗೆ ಸಾಹಿತ್ಯವನ್ನು ವಿತರಿಸಲಿದೆ ಎಂದು ತಿಳಿಸಿದರು.