ಸೊರಬ: ಇತಿಹಾಸ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬಾ ದೇವಿ ಬ್ರಹ್ಮರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತರು ದೇವಿಗೆ ವಿವಿಧ ಸೇವೆ ಸಲ್ಲಿಸಿದರು. ರಥೋತ್ಸವಕ್ಕೆ ಸಾಗರ ಉಪವಿಭಾಗಾಧಿಕಾರಿ ಆರ್.ಯತೀಶ್ ಚಾಲನೆ ನೀಡಿದರು. ದೇವಿಗೆ ದೀಡ್ ನಮಸ್ಕಾರ, ಪಡ್ಲಿಗೆ ಪೂಜೆ, ಚೌಲ ಸೇರಿ ವಿವಿಧ ರೀತಿಯ ಪೂಜಾ ಕೈಂಕರ್ಯಗಳು ನಡೆದವು. ರೈತರು ಅಡಕೆ, ಬಾಳೆಯ ಫಲವನ್ನು ರಥಕ್ಕೆ ಸಮರ್ಪಿಸಿದರು. ವಿವಿಧ ಗ್ರಾಮಗಳಿಂದ ರೈತರು ಎತ್ತಿನಗಾಡಿಯಲ್ಲಿ ಆಗಮಿಸಿದ್ದರು. ಟ್ರಾೃಕ್ಟರ್ ಮೇಲೆ ಬೆಲ್ಲದ ನೀರು ವಿತರಿಸಿದರು. ಜಾತ್ರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ತಹಸೀಲ್ದಾರ್ ಹುಸೇನ್ ಸರಕಾವಸ್, ಸೊರಬ ಸಹಾಯಕ ಚುನಾವಣಾಧಿಕಾರಿ ಜಿ.ರಾಜೇಶ್, ಸ್ಥಳೀಯ ಪ್ರಮುಖರು ಇದ್ದರು.