ಬೆಂಗಳೂರು: ಹೊಸ ವರ್ಷದ ಹೊಸ್ತಿಲಲ್ಲೇ ರಾಜ್ಯದ ಜನತೆಗೆ ಕರೆಂಟ್ ಶಾಕ್ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಇಂಧನ ಕ್ಷೇತ್ರ ಎದುರಿಸುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮತ್ತೆ ವಿದ್ಯುತ್ ದರ ಏರಿಸುವ ಸಲುವಾಗಿ ಕೆಇಆರ್ಸಿಗೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಶುರುವಾಗಿದೆ. ಕಳೆದ ವರ್ಷ ನವೆಂಬರ್ನಲ್ಲಿ ಪ್ರತಿ ಯೂನಿಟ್ಗೆ 33 ಪೈಸೆ ಹೆಚ್ಚಿಸಲು ಕೆಇಆರ್ಸಿ ಅನುಮತಿ ನೀಡಿತ್ತು. ಆದರೆ ಅದು ಸೀಮಿತ ಅವಧಿಗೆ ನೀಡಿದ ದರ ಏರಿಕೆಯಾಗಿತ್ತು. ಆದ್ದರಿಂದಲೇ ಈಗ ಮತ್ತೊಮ್ಮೆ ಪ್ರತಿ ಯೂನಿಟ್ಗೆ 1.39 ರೂ. ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲು ಎಲ್ಲ ವಿದ್ಯುತ್ ಸರಬರಾಜು ಸಂಸ್ಥೆಗಳು ಸಿದ್ಧವಾಗುತ್ತಿವೆ. ಕರೊನಾ ಕಾರಣದಿಂದ ಎಸ್ಕಾಂಗಳು ಕೇಳಿದಷ್ಟು ದರ ಹೆಚ್ಚಿಸುವುದಕ್ಕೆ ಕೆಇಆರ್ಸಿ ಒಪ್ಪಿರಲಿಲ್ಲ. ಆದರೆ ಹಿಂದಿನ ಪ್ರಸ್ತಾವನೆ ಬಾಕಿಯೂ ಸೇರಿ ಮುಂದಿನ 2 ವರ್ಷ ವಿದ್ಯುತ್ ದರ ಹೆಚ್ಚಳ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ ಎಂದು ಮೂಲಗಳು ಖಚಿತಪಡಿಸಿವೆ. ಇದರ ಜತೆಗೆ ಗ್ರಾಹಕರಿಂದ ವಸೂಲಿ ಮಾಡುವ ನಿಗದಿತ ಶುಲ್ಕವನ್ನೂ ಪ್ರತಿ ವರ್ಷ ಹೆಚ್ಚಿಸಲು ನಿರ್ಧರಿಸಲಾಗಿದೆ.
5 ತಿಂಗಳಿಗೆ ಸೀಮಿತ: ಕಳೆದ ವರ್ಷ ನವೆಂಬರ್ನಲ್ಲಿ ದರ ಹೆಚ್ಚಳಕ್ಕೆ ಕೆಇಆರ್ಸಿ ನೀಡಿದ್ದ ಅನುಮತಿ ಐದು ತಿಂಗಳಿಗೆ ಸೀಮಿತವಾಗಿತ್ತು. ದರ ಹೆಚ್ಚಳದ ಮೂಲಕ 2473 ಕೋಟಿ ರೂ.ಗಳನ್ನು ಏಳು ತಿಂಗಳ ಅವಧಿಯಲ್ಲಿ ವಸೂಲಿ ಮಾಡಬಹುದಾಗಿದ್ದು, ಅದರಲ್ಲಿ 1443 ಕೋಟಿ ರೂ.ಗಳನ್ನು ನಿಯಂತ್ರಕ ಸ್ವತ್ತಾಗಿ ಇಟ್ಟು ಆ ಮೊತ್ತವನ್ನು 2022-23ನೇ ಸಾಲಿನಲ್ಲಿ ವಸೂಲಿ ಮಾಡಲು ನಿರ್ಧರಿಸಲಾಗಿದೆ. ಉಳಿದ 1030 ಕೋಟಿ ರೂ.ಗಳನ್ನು 2021ನೇ ಸಾಲಿನ ಐದು ತಿಂಗಳ ಅವಧಿಗೆ ದರ ಪರಿಷ್ಕರಣೆಯ ಮೂಲಕ ವಸೂಲಿಗೆ ತೀರ್ವನಿಸಲಾಗಿದೆ.
ತಿಂಗಳ ವೆಚ್ಚ
- ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದಗಳ ಕಾರಣ ಉಷ್ಣ ವಿದ್ಯುತ್ ಸ್ಥಾವರಗಳಿಗೆ ನಿಗದಿತ ವೆಚ್ಚ
- ಸಿಬ್ಬಂದಿ ವೇತನ ಪರಿಷ್ಕರಣೆ, ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚ
- ಬಂಡವಾಳ ವೆಚ್ಚ ಹಾಗೂ ಸಾಲದ ಮೇಲಿನ ಬಡ್ಡಿ ಪಾವತಿ
5872 ಕೋಟಿ ರೂಪಾಯಿ ಹೊರೆ: ರಾಜ್ಯದ 5 ಎಸ್ಕಾಂಗಳು 5872 ಕೋಟಿ ರೂ.ಗಳ ಕೊರತೆ ಎದುರಿಸುತ್ತಿವೆ. ಆ ಹೊರೆಯನ್ನು ವಿದ್ಯುತ್ ದರ ಏರಿಕೆಯ ಮೂಲಕ ಭರಿಸಿಕೊಳ್ಳಲು ಮುಂದಾಗಿರುವುದಾಗಿ ಇಂಧನ ಇಲಾ ಖೆಯ ಮೂಲಗಳು ಖಚಿತ ಪಡಿಸಿವೆ.
ಸಮರ್ಥನೆ ಏನು?
- ವಿದ್ಯುತ್ ಖರೀದಿ ವೆಚ್ಚ ಪ್ರತಿ ವರ್ಷ ಹೆಚ್ಚಾಗುತ್ತಿರುವುದು ಸವಾಲಾಗಿದೆ
- ಕಾರ್ಯ, ನಿರ್ವಹಣೆ, ಬಂಡವಾಳ ವೆಚ್ಚಕ್ಕೆ ಪಡೆಯುವ ಸಾಲ ಹೆಚ್ಚಳ
2021ರಲ್ಲಿ ವೆಚ್ಚದ ಹೆಚ್ಚಳ
- ವಿದ್ಯುತ್ ಖರೀದಿಗೆ ಹೆಚ್ಚುವರಿ 3132 ಕೋಟಿ ರೂ. (ಶೇ.9.2)
- ಕಾರ್ಯ ಮತ್ತು ನಿರ್ವವಣೆ ವೆಚ್ಚದಲ್ಲಿ ಹೆಚ್ಚುವರಿ 1050 ಕೋಟಿ ರೂ. (ಶೇ.21.45)
- ಬಡ್ಡಿ ಹಾಗೂ ಇತರ ವೆಚ್ಚದಲ್ಲಿ ಹೆಚ್ಚುವರಿ 212 ಕೋಟಿ ರೂ.
- 2019ರ ಕೊರತೆ 1837.16 ಕೋಟಿ ರೂ.ಗಳನ್ನು ಮುಂದಕ್ಕೆ ಕೊಂಡೊಯ್ದಿರುವುದು