ಚಾಮರಾಜನಗರ: ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಗೆಲ್ಲುವ ವಿಶ್ವಾಸವಿದೆ. ಆದರೆ ಸ್ವಲ್ಪ ಎಡವಿದರೂ ಕಷ್ಟ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ಕುಮಾರ್ ಸುರಾನಾ ಕಿವಿಮಾತು ಹೇಳಿದರು.
ನಗರದ ಕುಲುಮೆ ರಸ್ತೆಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಭಾರತೀಯ ಜನತಾ ಪಾರ್ಟಿ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಟ್ಟಡ ಕಟ್ಟಲು ನೆರವಾದ ದಾನಿಗಳನ್ನು ಗುರುವಾರ ಸನ್ಮಾನಿಸಿ ಅವರು ಮಾತನಾಡಿದರು.
ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಬದಲಾವಣೆಯ ಪರ್ವಕ್ಕೆ ನಮ್ಮೆಲ್ಲರ ಕೊಡುಗೆ ಇರಲಿ. ದೇಶದಲ್ಲಿ ಗಲೀಜು, ಗುಲಾಮಿತನವನ್ನು ಸ್ವಚ್ಛ ಮಾಡುವ ಕೆಲಸ ನಡೆಯುತ್ತಿದೆ. ಕಾಂಗ್ರೆಸ್ನ ತುಷ್ಠೀಕರಣ, ಮೇಲ್ಜಾತಿಯವರು ಮೇಲಕ್ಕೆ ಬರದಂತೆ ಮಾಡಿತ್ತು. ಬಿಜೆಪಿ 1952ರಿಂದಲೂ ನಿರಂತವಾಗಿ ಕೆಲಸ ಮಾಡಿಕೊಂಡು ಬಂದಿದ್ದು, 2014ರ ನಂತರ ನಮ್ಮನ್ನು ಪ್ರಪಂಚವೇ ನೋಡುವಂತಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವದ ದೊಡ್ಡ ನಾಯಕರಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ತರ ಕೊಡುಗೆಗಳನ್ನು ಜನರಿಗೆ ನೀಡಿದ್ದಾರೆ ಎಂದರು.
ನೂತನ ಕಾರ್ಯಾಲಯ ಕಾರ್ಯಕರ್ತರ ದೇವಸ್ಥಾನವಾಗಲಿ. ಕಚೇರಿಯನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎನ್ನುವ ಬಗ್ಗೆ ಎಲ್ಲರೂ ಯೋಚಿಸಿ. ನಮ್ಮ ಪಕ್ಷ ಒಬ್ಬ ವ್ಯಕ್ತಿ ಪಕ್ಷವೂ ಅಲ್ಲ, ಕಚೇರಿಯೂ ಅಲ್ಲ. ಹಾಗಾಗಿ ನೂತನ ಕಾರ್ಯಾಲಯ ಜನರ ಕಚೇರಿ ಎಂದು ತಿಳಿಸಿದರು.
ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ್ಕುಮಾರ್ ಮಾತನಾಡಿ, ನೂತನ ಕಚೇರಿಯನ್ನು ಪದಾಧಿಕಾರಿಗಳು ಸದ್ಭಳಕೆ ಮಾಡಿಕೊಳ್ಳಿ. ಬಡಜನರು, ಕಾರ್ಯಕರ್ತರಿಗೆ ಸ್ಪಂದಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪಕ್ಷಕ್ಕೆ ಸ್ವಂತ ಕಟ್ಟಡ ಇರಬೇಕೆಂಬ ಪಕ್ಷದ ಆಶಯದಂತೆ ಚಾಮರಾಜನಗರದಲ್ಲಿ ನೂತನ ಕಟ್ಟಡ ನಿರ್ಮಾಣವಾಗಿದೆ. ರಾಜ್ಯದ 10 ಜಿಲ್ಲೆಗಳಲ್ಲಿ ಗುರುವಾರ ಹೊಸ ಕಾರ್ಯಾಲಯವನ್ನು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಉದ್ಘಾಟನೆ ಮಾಡಿದ್ದಾರೆ. ಚಾ.ನಗರದ ಕಚೇರಿಯಿಂದ ಸ್ಥಿರವಾದ ನೆಲೆ ಕಂಡುಕೊಳ್ಳಲು ಸಹಾಯವಾಗಿದೆ. ಈ ಮೂಲಕ ಉತ್ತಮ ಸಂಘಟನೆ ಮಾಡಬೇಕು. ನೂತನ ಕಚೇರಿ ನಿರ್ಮಾಣಕ್ಕೆ ದಾನಿಗಳು ಅಲ್ಪ ಪ್ರಮಾಣದಲ್ಲಿ ದೇಣಿಗೆ ನೀಡಿದರೆ ಪಕ್ಷ ಹೆಚ್ಚು ಸಹಾಯ ಮಾಡಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮಣಿ, ಮೈಸೂರು ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್, ಜಿಲ್ಲಾ ಉಸ್ತುವಾರಿ ರಾಜೇಂದ್ರ, ವಿಧಾನಪರಿಷತ್ ಮಾಜಿ ಸದಸ್ಯ ಪ್ರೊ.ಮಲ್ಲಿಕಾರ್ಜುನಪ್ಪ, ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಕಟ್ಟಡ ಸಮಿತಿ ಸಂಯೋಜಕ ಬಾಲಸುಬ್ರಹ್ಮಣ್ಯಂ, ಹೇಮಂತ್ ಇತರರು ಇದ್ದರು.
ದೇಣಿಗೆ ಕೊಟ್ಟವರಿಗೆ ಸನ್ಮಾನ: ಇದೇ ವೇಳೆ ಪಕ್ಷದ ಕಚೇರಿ ನಿರ್ಮಾಣಕ್ಕೆ ದೇಣಿ ನೀಡಿದ ಗುಂಡ್ಲುಪೇಟೆ ಶಾಸಕ ಸಿ.ಎಸ್. ನಿರಂಜನ್ಕುಮಾರ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು, ಬಿಜೆಪಿ ಉಪಾಧ್ಯಕ್ಷರಾದ ದತ್ತೇಶ್ಕುಮಾರ್, ವೃಷಭೇಂದ್ರಪ್ಪ, ಸೋಮಶೇಖರ್, ಕೋರ್ ಕಮಿಟಿ ಸದಸ್ಯ ಡಾ.ಬಾಬು, ಡಾ.ಪ್ರೀತನ್ನಾಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣಪ್ರಸಾದ್, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಗುಂಡ್ಲುಪೇಟೆ ಎಪಿಎಂಸಿ ಅಧ್ಯಕ್ಷ ರವಿ ಅವರನ್ನು ಸನ್ಮಾನಿಸಲಾಯಿತು. ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ಕುಮಾರ್ ದೇಣಿಗೆ ನೀಡಿದ್ದಕ್ಕೆ ಅವರ ಅನುಪಸ್ಥಿತಿಯಲ್ಲಿ ವಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮ ವೀಕ್ಷಣೆ: ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೊಪ್ಪಳದಲ್ಲಿ ನೂತನ ಬಿಜೆಪಿ ಕಚೇರಿ ಉದ್ಘಾಟನೆ ಮಾಡುವ ಕಾರ್ಯಕ್ರಮವನ್ನು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ವರ್ಚುವಲ್ನಲ್ಲಿ ವೀಕ್ಷಣೆ ಮಾಡಿದರು.
ನೂತನ ಕಾರ್ಯಾಲಯದ ನಿರ್ಮಾಣದಿಂದಾಗಿ ಜಿಲ್ಲೆಯಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಕುಳಿತು ಕೆಲಸ ಮಾಡಲು ಅವಕಾಶ ಸಿಕ್ಕದೆ. ಕಚೇರಿಗೆ ಅಗತ್ಯವಿರುವ ಕುರ್ಚಿ, ಟೇಬಲ್ಗಳನ್ನು ನಾನು ಕೊಡುತ್ತೇನೆ.