ಚಾಮರಾಜನಗರ: ಬಿಆರ್ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರಗಳನ್ನು ಸಾಗಿಸುತ್ತಿದ್ದ ಖದೀಮರು, ಅರಣ್ಯಾಧಿಕಾರಿಗಳನ್ನು ಕಂಡು ವಾಹನ ಬಿಟ್ಟು ಪರಾರಿಯಾಗಿದ್ದಾರೆ.
ತಾಲೂಕಿನ ಯತ್ತಗಟ್ಟಿಬೆಟ್ಟದ ಸಮೀಪದ ಸುವರ್ಣನಗರದ ಬಳಿ ಗುರುವಾರ ರಾತ್ರಿ 11 ಗಂಟೆ ವೇಳೆಯಲ್ಲಿ ನೀಲಗಿರಿ ಮತ್ತು ಅಕೇಷಿಯಾ ಮರಗಳ ದಿಮ್ಮಿಯನ್ನು ಮೂವರು ಮರಗಳ್ಳರು ಮಿನಿ ಟ್ರಕ್ನಲ್ಲಿ ಸಾಗಿಸುತ್ತಿದ್ದರು. ಇದೇ ವೇಳೆ ಗಸ್ತಿನಲ್ಲಿದ್ದ ಅರಣ್ಯಾಧಿಕಾ ರಿಗಳನ್ನು ಕಂಡು ಹೌಹಾರಿದ್ದಾರೆ. ಅಲ್ಲದೆ ವಾಹನವನ್ನು ಹಳ್ಳಕ್ಕೆ ಬಿಟ್ಟು ಮೇಲೆತ್ತಲು ವಿಫಲ ಯತ್ನ ನಡೆಸಿ ಹತ್ತಿರಕ್ಕೆ ಬಂದ ಅರಣ್ಯ ಸಿಬ್ಬಂದಿಯನ್ನು ನೋಡಿ ಪರಾರಿಯಾಗಿದ್ದಾರೆ.
ನಂತರ ವಾಹವನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ನೀಲಗಿರಿ ಮತ್ತು ಅಕೇಷಿಯಾ ಮರಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ ಪರಾರಿಯಾಗಿರುವವರ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.
ಕಾರ್ಯಾಚರಣೆಯಲ್ಲಿ ಚಾಮರಾಜನಗರ ಪ್ರಾದೇಶಿಕ ವಲಯದ ಡಿಆರ್ಎಫ್ಒ ಚಂದ್ರಕುಮಾರ್, ಸಿಬ್ಬಂದಿ ದೊರೆನಾಯ್ಕ, ಹೇಮಂತ್, ಮಹದೇವ, ಮಹೇಶ, ಗುರುಸ್ವಾಮಿ ಭಾಗವಹಿಸಿದ್ದರು.