ಚಳ್ಳಕೆರೆ: ಆರೋಗ್ಯವಂತ ಮಕ್ಕಳಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆರೋಗ್ಯ ಮಕ್ಕಳು ದೇಶದ ನಿಜ ಆಸ್ತಿ ಎಂದರು.
ಐದು ವರ್ಷದೊಳಗಿನ ಯಾವ ಮಗುವೂ ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಗ್ರಾಮೀಣರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಹತ್ತು ವರ್ಷದ ತನಕ ಮಕ್ಕಳು ದಡಾರ, ಜ್ವರ ಮತ್ತಿತರರ ಸಮಸ್ಯೆಗಳು ಹೆಚ್ಚು ಇವುಗಳ ತಡೆಯಲು, ರೋಗ ನಿರೋಧಕ ಶಕ್ತಿಯಾಗಿರುವ ಪಲ್ಸ್ ಪೋಲಿಯೋ ಪ್ರತಿ ಮಗುವಿಗೂ ಕೊಡಿಸಬೇಕು ಎಂದು ಸಲಹೆ ನೀಡಿದರು.
ಟಿಎಚ್ಒ ಡಾ.ಎನ್.ಪ್ರೇಮಸುಧಾ ಮಾತನಾಡಿ, ತಾಲೂಕಿನ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ 31,126 ಮಕ್ಕಳಿಗೆ ಪೋಲಿಯೋ ಹಾಕುವ ಗುರಿ ಇದೆ. ಇದಕ್ಕಾಗಿ 243 ಬೂತ್ ಕೇಂದ್ರ, ಮೊಬೈಲ್ ತಂಡ ರಚನೆ ಮಾಡಿಕೊಳ್ಳಲಾಗಿದೆ. ನಗರ ಪ್ರದೇಶದಲ್ಲಿ 82, ಗ್ರಾಮೀಣ ಭಾಗದಲ್ಲಿ 404 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. 48 ಅಧಿಕಾರಿಗಳು ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ನಗರಸಭೆ ಪ್ರಭಾರ ಪೌರಾಯುಕ್ತ ಪಾಲಯ್ಯ, ತಾಪಂ ಸದಸ್ಯ ಜಿ.ವೀರೇಶ್, ವೈದ್ಯಾಧಿಕಾರಿ ಡಾ.ಬಸವರಾಜ್, ಆರೋಗ್ಯ ಸಹಾಯಕ ಎಸ್.ಬಿ.ತಿಪ್ಪೇಸ್ವಾಮಿ, ನಿರ್ಮಲಾ, ಗಾಯತ್ರಿ, ಕಮಲಾಕ್ಷಮ್ಮ ಮತ್ತಿತರರಿದ್ದರು.