ಚಳ್ಳಕೆರೆ: ಶೋಷಿತ ಮಹಿಳೆಯರಲ್ಲಿ ಅಕ್ಷರ ಬೀಜ ಬಿತ್ತಿ ಅಸಮಾನತೆ ತೊಡೆದು ಹಾಕುವಲ್ಲಿ 12ನೇ ಶತಮಾನದ ಬಸವಾದಿ ಶಿವಶರಣದ ಕೊಡುಗೆ ಅಪಾರವಾಗಿದೆ ಎಂದು ಭೋವಿ ಮಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ಭೋವಿ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 847ನೇ ಸಿದ್ದರಾಮೇಶ್ವರ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಯಾವ ದೇಶದಲ್ಲಿ ಸ್ತ್ರೀಗೆ ಸಮಾನ ಅವಕಾಶ ಕಲ್ಪಿಸುವುದಿಲ್ಲವೋ ಆ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಪ್ರಗತಿ ಸ್ವಾತಂತ್ರ್ಯದಂತೆ. ಇದನ್ನು ಪಡೆಯಲು ಮಹಿಳೆಯರಿಗೆ ಸಾಮಾಜಿಕ ನ್ಯಾಯ ದೊರಕಬೇಕು. ಸ್ತ್ರೀಕುಲದ ಉದ್ಧಾರಕ ಸಿದ್ದರಾಮೇಶ್ವರ ಬದುಕಿನ ಆದರ್ಶ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಭೋವಿ ಸಮುದಾಯ ಈಗಲೂ ಕಲ್ಲು ಒಡೆದು ಜೀವನ ನಡೆಸುತ್ತಿದೆ. ಈ ಕಾಯಕವನ್ನು ಆಧುನೀಕರಿಸಿಕೊಂಡರೆ ಇನ್ನಷ್ಟು ಪ್ರಗತಿ ಸಾಧ್ಯವಾಗುತ್ತದೆ ಎಂದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ಕುಡಿವ ಉದ್ದೇಶಕ್ಕಾಗಿ ವಿವಿ ಸಾಗರದಿಂದ 0.25 ಟಿಎಂಸಿ ಅಡಿ ನೀರನ್ನು ವೇದಾವತಿ ನದಿ ಭಾಗಕ್ಕೆ ಹರಿಸುವ ಸಂಬಂಧ ಸರ್ಕಾರಕ್ಕೆ ಅಗತ್ಯ ದಾಖಲೆ ಸಹಿತ ಮನವರಿಕೆ ಮಾಡಿಕೊಡಲಾಗಿದೆ. ಶೀಘ್ರವೇ ನದಿಗೆ ನೀರು ಹರಿಯುವ ವಿಶ್ವಾಸವಿದೆ. ಈಗಾಗಲೇ ಬ್ಯಾರೇಜ್ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ನಿವೃತ್ತ ಪ್ರಾಚಾರ್ಯ ಎಚ್.ಕನಕದಾಸ, ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ಮುಖಂಡ ಎಂ.ರಾಮಪ್ಪ, ಕೋಡಿಹಳ್ಳಿ ತಿಪ್ಪೇಸ್ವಾಮಿ, ಉದ್ಯಮಿ ಜಗದೀಶ ಮಾತನಾಡಿದರು.
ಜಿಪಂ ಮಾಜಿ ಸದಸ್ಯರಾದ ಟಿ.ರವಿಕುಮಾರ್, ಎ.ಅನಿಲ್ಕುಮಾರ್, ತಾಪಂ ಸದಸ್ಯರಾದ ಸಣ್ಣಸೂರಯ್ಯ, ಪಿ.ತಿಮ್ಮಾರೆಡ್ಡಿ, ಎಚ್.ಆಂಜನೇಯ, ಟಿ.ಗಿರಿಯಪ್ಪ, ಜಿ.ವೀರೇಶ್, ಹನುಮಕ್ಕ, ನಗರಸಭೆ ಸದಸ್ಯರಾದ ಟಿ.ಮಲ್ಲಿಕಾರ್ಜುನ, ಬಿ.ಟಿ.ರಮೇಶಗೌಡ ಮತ್ತಿತರರಿದ್ದರು.
ಹೊಳಲ್ಕೆರೆ ಚಂದ್ರಪ್ಪಗೆ ಮಂತ್ರಿ ಪದವಿ ಗಟ್ಟಿ: ಕಳೆದ ಸಚಿವ ಸಂಪುಟ ವಿಸ್ತರಣೆ ಅವಧಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ವರಿಷ್ಠರಿಗೆ ಕಳುಹಿಸಿಕೊಟ್ಟಿದ್ದ ಪಟ್ಟಿಯಲ್ಲಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಹೆಸರು ಇತ್ತು. ಆದರೆ, ಕೊನೆಗಳಿಗೆಯಲ್ಲಿ ರಾಜಕೀಯ ತಂತ್ರಗಾರಿಕೆಯಿಂದ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಇದೇ ಸರ್ಕಾರದ ಅವಧಿಯಲ್ಲಿ ಚಂದ್ರಪ್ಪ ಮಂತ್ರಿ ಆಗುವುದು ನೂರಕ್ಕೆ ನೂರು ಖಚಿತ ಎಂದು ಭೋವಿ ಮಠದ ಶ್ರೀ ಭವಿಷ್ಯ ನುಡಿದರು.
ರಘುಮೂರ್ತಿ ಕೆಲಸ ಶಾಸಕ ಚಂದ್ರಪ್ಪ ಮೆಚ್ಚುಗೆ: ರಾಜಕಾರಣದಲ್ಲಿ ನಾನು ಹಿರಿಯನಾಗಿದ್ದರೂ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರ ಅಭಿವೃದ್ಧಿ ಕಾರ್ಯಗಳು ನನಗೆ ಪ್ರೇರಣೆ ನೀಡುತ್ತಿವೆ. ಕಳೆದ ಒಂದೂವರೆ ವರ್ಷ ಅವಧಿಯಲ್ಲಿ ಹೊಳಲ್ಕೆರೆ ಕ್ಷೇತ್ರಕ್ಕೆ 1900 ಕೋಟಿ ರೂ. ಅನುದಾನ ತಂದು ಜನಪರ ಕಾರ್ಯ ಕೈಗೊಂಡಿದ್ದೇನೆ. ಇದಕ್ಕೆ ರಘುಮೂರ್ತಿ ಕೆಲಸ ಸ್ಫೂರ್ತಿ ಎಂದು ಬಿಜೆಪಿ ಶಾಸಕ ಎಂ.ಚಂದ್ರಪ್ಪ ಮೆಚ್ಚುಗೆ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದರು.