ಚಳ್ಳಕೆರೆ: ವಿಶೇಷ ಪ್ಯಾಕೇಜ್ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನುದಾನರಹಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಅವರಿಗೆ ನಗರದಲ್ಲಿ ಶನಿವಾರ ಮನವಿ ಸಲ್ಲಿಸಿದರು.
ಕೋವಿಡ್ ಕಾರಣ ಶಾಲೆ ಪ್ರಾರಂಭವಾಗದೇ ಜೀವನ ನಡೆಸುವುದು ಸಮಸ್ಯೆಯಾಗಿದೆ. ನಮಗೆ ಸೇವಾ ಭದ್ರತಾ ನೀಡಬೇಕು. ಬ್ಯಾಂಕ್ ಖಾತೆಗೆ ನೇರವಾಗಿ ವೇತನ ಪಾವತಿಯಾಗಬೇಕು. ಸಿಬ್ಬಂದಿಯೇತರ ವರ್ಗದವರಿಗೂ ಪ್ಯಾಕೇಜ್ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಸಚಿವರು, ವಿಶೇಷ ಪ್ಯಾಕೇಜ್ ನೀಡುವ ಕುರಿತು ಸರ್ಕಾರದ ಹಂತದಲ್ಲಿ ಚಿಂತನೆ ಇದೆ. ಕೂಡಲೇ ಮುಖ್ಯಮಂತ್ರಿ ಜತೆ ಚರ್ಚೆ ಮಾಡಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಶಿಕ್ಷಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೌರೀಶ್, ತಾಲೂಕಾಧ್ಯಕ್ಷ ತಿಪ್ಪಾರೆಡ್ಡಿ, ಕಾರ್ಯದರ್ಶಿ ಟಿ.ಮಹಾಂತೇಶ, ಕೆ.ಎಂ.ಜಯಣ್ಣ, ಡಿ.ಆರ್.ರಂಗಸ್ವಾಮಿ, ಡಿ.ಉಮೇಶ್, ಬೋರಯ್ಯ ಮತ್ತಿತರರು ಇದ್ದರು.