More

    ಬಂಧಿಸಲು ಹೋದಾಗ ಸೈನೈಡ್ ಸೇವಿಸಿ ಸರ ಕಳ್ಳತನ ಆರೋಪಿ ಸಾವು

    ಬೆಂಗಳೂರು: ಸರ ಕಳವು ಆರೋಪ ಪ್ರಕರಣದಲ್ಲಿ ಕೆ.ಆರ್.ಪುರ ಪೊಲೀಸರು ಇಬ್ಬರು ಸರಗಳ್ಳರನ್ನು ವಶಕ್ಕೆ ಪಡೆದಾಗ ಒಬ್ಬಾತ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮತ್ತೊಬ್ಬನನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.

    ಆಂಧ್ರಪ್ರದೇಶ ಕೊತ್ತಕೊಟಾ ಗ್ರಾಮದ ಸಿ. ಶಂಕರ್ (42) ಮೃತ ಸರಗಳ್ಳ. ಈತನ ಸಹಚರ ಚಂದ್ರಶೇಖರ್ ಎಂಬಾತನನ್ನು ಬಂಧಿಸಲಾಗಿದೆ. ಮೃತ ಶಂಕರ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಏಳು ಪ್ರಕರಣಗಳು ದಾಖಲಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜುಲೈ 6ರ ಸಂಜೆ 6.30ರಲ್ಲಿ ಭಟ್ಟರಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನ ಸಮೀಪ ರತ್ನಮ್ಮ (51) ಎಂಬಾಕೆ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಆರೋಪಿಗಳು 55 ಗ್ರಾಂ ಸರ ಕಸಿದು ಪರಾರಿ ಆಗಿದ್ದರು. ಈ ಕುರಿತು ಮಹಿಳೆ ನೀಡಿದ ದೂರಿನ ಮೇರೆಗೆ ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವೈಟ್‌ಫೀಲ್ಡ್ ವಿಭಾಗ ಡಿಸಿಪಿ ದೇವರಾಜ್, ಸರಗಳ್ಳರ ಪತ್ತೆಗೆ ಪಿಎಸ್‌ಐ ಸುಬ್ರಮಣಿ ನೇತೃತ್ವದಲ್ಲಿ ತಂಡ ರಚಿಸಿದ್ದರು. ತನಿಖೆ ಕೈಗೊಂಡ ಪೊಲೀಸರು, ಕೃತ್ಯ ನಡೆದ ಸ್ಥಳದಲ್ಲಿ ಲಭ್ಯವಾದ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಆರೋಪಿಗಳ ಮುಖಚಹರೆ ಲಭ್ಯವಾಗಿದೆ.

    ಹಳೇ ಆರೋಪಿಗಳ ಪಟ್ಟಿ ತೆರೆದು ಹೋಲಿಕೆ ಮಾಡಿದಾಗ ಶಂಕರ್ ಮತ್ತು ಚಂದ್ರಶೇಖರ್ ಎಂಬುದು ಬೆಳಕಿಗೆ ಬಂದಿದೆ. ಈ ಸುಳಿವಿನ ಮೇರೆಗೆ ಆರೋಪಿಗಳ ಬಂಧನಕ್ಕಾಗಿ ಕೊತ್ತಕೊಟ್ಟ ಗ್ರಾಮಕ್ಕೆ ಹೋದಾಗ ಜುಲೈ 27ರ ಮಧ್ಯಾಹ್ನ 2 ಗಂಟೆಯಲ್ಲಿ ಪಲ್ಸರ್ ಬೈಕ್‌ನಲ್ಲಿ ಬೆಂಗಳೂರಿಗೆ ಆರೋಪಿಗಳು ಬರುತ್ತಿರುವುದು ಅನುಮಾನ ಬಂದಿದೆ. ಮುಖ ಚಹರೆ ಖಚಿತ ಪಡಿಸಿಕೊಳ್ಳಲು ಪೊಲೀಸರು, ಮಫ್ತಿಯಲ್ಲಿ ಬೈಕ್ ಹಿಂದೆಯೇ ಹಿಂಬಾಲಿಸಿಕೊಂಡು ಬರುತ್ತಿರುವಾಗ ಹೊಸಕೋಟೆ ಮತ್ತು ಚಿಂತಾಮಣಿ ಮುಖ್ಯ ರಸ್ತೆಯಲ್ಲಿ ಇರುವ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬೈಕ್ ನಿಲ್ಲಿಸಿದ್ದರು. ದೇವಸ್ಥಾನಕ್ಕೆ ಹೋಗಲು ಕೈಕಾಲು ತೊಳೆಯುತ್ತಿದ್ದಾಗ ಆರೋಪಿಗಳನ್ನು ವಶಕ್ಕೆ ಪಡೆಯಲು ವಾಹನ ಇಳಿದ ಪೊಲೀಸರನ್ನು ಕಂಡು ಪ್ಯಾಂಟ್ ಜೇಬಿನಲ್ಲಿದ್ದ ವಸ್ತುಗಳನ್ನು ಶಂಕರ್ ಬಾಯಿಗೆ ಹಾಕಿಕೊಂಡಿದ್ದಾನೆ. ತಕ್ಷಣ ಹತ್ತಿರ ಹೋದ ಪೊಲೀಸರು, ಸಾರ್ವಜನಿಕರ ಸಹಾಯದಿಂದ ಶಂಕರ್‌ನನ್ನು ಹತ್ತಿರದ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮತ್ತೊಬ್ಬ ಚಂದ್ರಶೇಖರ್ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬಂಧಿಸಲಾಗಿದೆ. ಈ ಕುರಿತು ಸೂಲಿಬೆಲೆ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬೈಕ್‌ನಲ್ಲಿ ಬಂದು ಸರಗಳವು
    ಜಯನಗರ, ಗಿರಿನಗರ, ಸಿ.ಕೆ.ಅಚ್ಚುಕಟ್ಟು ಮತ್ತು ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರ ಕಳವು ಮಾಡಿದ್ದ ಶಂಕರ್, ಬಂಧನಕ್ಕೆ ಒಳಗಾಗಿ ಜೈಲು ಸೇರುತ್ತಿದ್ದ. ಜಾಮೀನು ಪಡೆದು ಹೊರ ಬಂದ ಮೇಲೆ ಮತ್ತೆ ಹಳೇ ಚಾಳಿ ಮುಂದುವರೆಸುತ್ತಿದ್ದ. ಆಂಧ್ರದಿಂದ ಬೈಕ್‌ನಲ್ಲಿ ತನ್ನ ಸಹಚರರ ಜೊತೆ ಬಂದು ನಗರದ ಎಲ್ಲೆಡೆ ಸುತ್ತಾಡಿ ಒಂಟಿ ಮಹಿಳೆಯರ ಬಳಿ ಚಿನ್ನದ ಸರ ಕಸಿದು ವಾಪಸ್ ಆಂಧ್ರಕ್ಕೆ ಹೋಗುತ್ತಿದ್ದ.

    ಯಶಿಕಾ ಕಾರು ಅಪಘಾತ ಪ್ರಕರಣ: ಮೃತ ಭವಾನಿ ಧರಿಸಿದ್ದ ಉಡುಗೆಯೇ ದುರಂತಕ್ಕೆ ಕಾರಣವಾಯ್ತಾ?

    ಪಾಕಿಸ್ತಾನದ ಕರಾಚಿಯಲ್ಲಿ ಇಬ್ಬರು ಚೀನಾ ಪ್ರಜೆಗಳ ಮೇಲೆ ಗುಂಡಿನ ದಾಳಿ!

    ಭೀಕರ ಭೂಕುಸಿತ ಬೆನ್ನಲ್ಲೇ ವರುಣನ ಆರ್ಭಟಕ್ಕೆ ನಲುಗಿದ ಹಿಮಾಚಲ ಪ್ರದೇಶ: 9 ಸಾವು, 7 ಮಂದಿ ನಾಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts