ನವದೆಹಲಿ: ಕರೊನಾದಿಂದಾಗಿ ಮೃತಪಟ್ಟವರ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ರೂಪಾಯಿ ಕೊಡಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಈ ರೀತಿಯ ಪರಿಹಾರವನ್ನು ನೈಸರ್ಗಿಕ ವಿಕೋಪಗಳಿಂದಾಗಿ ಮೃತರಾದವರ ಕುಟುಂಬಕ್ಕೆ ಮಾತ್ರ ಕೊಡಲು ಸಾಧ್ಯ ಎಂದು ತಿಳಿಸಲಾಗಿದೆ.
ಕರೊನಾದಿಂದ ಮೃತರರಾದವರಿಗೆ ಕನಿಷ್ಠ ಪರಿಹಾರ ಮಾನದಂಡ ಹಾಗೂ ಎಕ್ಸ್ ಗ್ರೇಟಿಯಾ ಪಾವತಿ ಬಗ್ಗೆ ಸುಪ್ರೀಂ ಹಾಕಲಾಗಿದ್ದ ಅರ್ಜಿ ವಿಚಾರಣೆ ವೇಳೆ ಕೇಂದ್ರ ಈ ಮಾಹಿತಿ ನೀಡಿದೆ. ಭಾರತದಲ್ಲಿ ಇದುವರೆಗೆ ಸುಮಾರು ನಾಲ್ಕು ಲಕ್ಷ ಜನರು ಕರೊನಾಕ್ಕೆ ಬಲಿಯಾಗಿದ್ದಾರೆ. ಅವರೆಲ್ಲರಿಗೆ 4 ಲಕ್ಷ ರೂಪಾಯಿ ಕೊಡುತ್ತಾ ಹೋದರೆ ಎಸ್ಡಿಆರ್ಎಫ್ನ ಸಂಪೂರ್ಣ ಮೊತ್ತವನ್ನು ಅದಕ್ಕೇ ಬಳಸಬೇಕಾಗುತ್ತದೆ. ಅದೂ ಸಾಕಾಗದೆ ಮತ್ತೆ ಬೇರೆ ಮೊತ್ತ ಬೇಕಾಗಬಹುದು ಎಂದು ಕೇಂದ್ರ ಹೇಳಿದೆ.
ಈ ರೀತಿ ಎಕ್ಸ್ ಗ್ರೇಟಿಯಾ ಕೊಡುವುದರಿಂದ ರಾಜ್ಯಗಳ ಮೇಲೆ ಹೊರೆ ಆಗಲಿದೆ. ಈಗಾಗಲೇ ರಾಜ್ಯಗಳು ವೈದ್ಯಕೀಯ ಸೌಲಭ್ಯಗಳಿಂದಾಗಿ ಆರ್ಥಿಕ ಸಂಕಷ್ಟಕ್ಕೂ ಸಿಲುಕಿವೆ. ಹೀಗಿರುವಾಗ ಎಕ್ಸ್ ಗ್ರೇಟಿಯಾ ಕೊಡಲು ಹೋದರೆ, ಕರೊನಾ ನಿರ್ವಹಣೆಗೂ ತೊಂದರೆ ಉಂಟಾಗಲಿದೆ. ಮತ್ತು ಚಂಡಮಾರುತಗಳು, ಪ್ರವಾಹಗಳಂತಹ ಇತರ ವಿಪತ್ತುಗಳು ಬಂದಾಗ ಸ್ಪಂದಿಸಲು ಆಗದೇ ಹೋಗಬಹುದು. ಆದ್ದರಿಂದ ಈ ಅರ್ಜಿಯು ರಾಜ್ಯ ಸರ್ಕಾರಗಳ ಹಣಕಾಸಿನ ಕೈಗೆಟುಕುವಿಕೆಯನ್ನು ಮೀರಿದೆ ಎಂದು ಹೇಳಲಾಗಿದೆ. ಕರೊನಾವನ್ನು ವಿಪತ್ತು ಎಂದು ಪರಿಗಣಿಸಲಾಗುವುದಿಲ್ಲ. ಮರಣ ಪ್ರಮಾಣದಲ್ಲಿ ಕರೊನಾದಿಂದಾಗಿ ಸಾವು ಎಂದೇ ದಾಖಲಿಸಲಾಗುವುದು ಎಂದು ತಿಳಿಸಲಾಗಿದೆ.
ವಿಮಾದಾರರಿಗೆ ಶೀಘ್ರವಾಗಿ ಹಣ ಬಿಡುಗಡೆ ಮಾಡುವಂತೆ ವಿಮಾ ಕಂಪನಿಗಳಿಗೆ ಸರ್ಕಾರ ತಿಳಿಸಿದೆ. ಜಿಲ್ಲಾಧಿಕಾರಿಗಳು ಇದರ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ವಿಮಾ ಕಂಪನಿಗಳಿಗೆ 442.4 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 2019-20ರಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ನಲ್ಲಿ 1,113.21 ಕೋಟಿ ರೂ. ಹೆಚ್ಚುವರಿ ಹಣವನ್ನು ಕರೊನಾ ನಿರ್ವಹಣೆಗೆಂದು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ. ಭಾರತದ ಕೋವಿಡ್ -19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆಗಳ ಸಿದ್ಧತೆ ಪ್ಯಾಕೇಜ್ನಲ್ಲಿ 8,257.89 ಕೋಟಿ ರೂ.ಗಳನ್ನು ರಾಜ್ಯಗಳಿಗೆ ನೀಡಲಾಗಿದೆ ಎಂದು ಕೇಂದ್ರ ಮಾಹಿತಿ ನೀಡಿದೆ. (ಏಜೆನ್ಸೀಸ್)
81 ದಿನಗಳಲ್ಲಿ ಅತ್ಯಂತ ಕಡಿಮೆ ಕರೊನಾ ಪ್ರಕರಣ ಪತ್ತೆ! 60 ಸಾವಿರದ ಕೆಳಗಿಳಿದ ಏಕದಿನ ಏರಿಕೆ
ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್ ತಾಳಲಾರದೆ ಆತ್ಮಹತ್ಯೆ!