ಮಂಗಳೂರು: ಸೆಂಟ್ರಲ್ ಮಾರುಕಟ್ಟೆ ಕಟ್ಟಡ ತೆರವು ಪ್ರಕ್ರಿಯೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದ ಹಿನ್ನೆಲೆಯಲ್ಲಿ ಅರ್ಧದಲ್ಲಿ ಸ್ಥಗಿತಗೊಂಡ ಪರಿಣಾಮ ಇದೀಗ ಪರಿಸರದಲ್ಲಿ ಓಡಾಡುವವರಿಗೆ ಗೋಡೆಗಳು ಅಪಾಯಕಾರಿಯಾಗಿ ಪರಿಣಮಿಸಿದೆ.
ಮಳೆಗೆ ಗೋಡೆಗಳು ಶಿಥಿಲವಾಗಿ ಕುಸಿಯುವ ಭೀತಿಯಲ್ಲಿದೆ. ಕಟ್ಟಡದ ಮೇಲ್ಭಾಗದಲ್ಲಿ ನೀರಿನ ಟ್ಯಾಂಕ್ ಕೂಡ ಇದ್ದು, ನೆಲಕ್ಕೆ ಬೀಳುವ ಹಂತದಲ್ಲಿದೆ. ಇದರ ಅಡಿ ಭಾಗದಲ್ಲಿ ರಸ್ತೆ ಇದೆ. ಕೈಗಾಡಿಗಳಲ್ಲಿ ತರಕಾರಿ ಮಾರಾಟ ಮಾಡುವವರಿದ್ದಾರೆ. ಪಾದಚಾರಿಗಳು, ವಾಹನಗಳು ಸಂಚರಿಸುತ್ತಲೇ ಇರುತ್ತವೆ. ಹಗಲಿನ ವೇಳೆ ಕುಸಿದು ಬಿದ್ದರೆ ಪ್ರಾಣಹಾನಿಯಾಗುವ ಸಂಭವ ಇದೆ. ಈ ಬಗ್ಗೆ ಮನಪಾ ತಕ್ಷಣ ಗಮನ ಹರಿಸಬೇಕಾಗಿದೆ.
ಕೋರ್ಟ್ ಪ್ರಕರಣ ಶೀಘ್ರ ಇತ್ಯರ್ಥಗೊಳ್ಳುವ ನಿರೀಕ್ಷೆ ಇದೆ. ಕಟ್ಟಡ ಬಳಿ ವಾಹನ ಪಾರ್ಕಿಂಗ್ ಮಾಡದಂತೆ, ತರಕಾರಿ, ಹಣ್ಣು ಮಾರಾಟ ಮಾಡುವ ಕೈಗಾಡಿಗಳನ್ನು ದೂರದಲ್ಲಿ ನಿಲ್ಲಿಸಿ ವ್ಯಾಪಾರ ಮಾಡುವಂತೆ ಎಚ್ಚರಿಕೆ ನೀಡಲಾಗುವುದು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ.