ನವದೆಹಲಿ: ಆಡಂಬರದಿಂದ ಹಬ್ಬ ಮಾಡಿ ಎಂದು ಯಾವ ಧರ್ಮ-ದೇವರೂ ಹೇಳಲ್ಲ ಎಂಬುದಾಗಿ ಕೇಂದ್ರ ಸಚಿವ ಡಾ.ಹರ್ಷವರ್ಧನ್ ಸಾರ್ವಜನಿಕರಿಗೆ ಕಿವಿಮಾತು ಹೇಳಿದ್ದಾರೆ. ದಸರಾ-ದೀಪಾವಳಿ ಹತ್ತಿರ ಬಂದರೂ ಕರೊನಾ ಹಾವಳಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಅವರು ಈ ಸಲಹೆ ನೀಡಿದ್ದಾರೆ.
‘ಸಂಡೇ ಸಂವಾದ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಹಬ್ಬದ ಆಚರಣೆ ಹತ್ತಿರ ಬಂದಿದೆ. ಹೀಗಾಗಿ ಸಾರ್ವಜನಿಕರು ಜನಜಂಗುಳಿಯಿಂದ ದೂರವಿರುವ ಜತೆಗೆ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಸಾರ್ವಜನಿಕರು ಹೊರಗಿನ ಪೆಂಡಾಲ್-ಉತ್ಸವಗಳ ಬದಲು ತಂತಮ್ಮ ಮನೆಯಲ್ಲಿ, ಮನೆಯವರು ಹಾಗೂ ಪ್ರೀತಿ-ಪಾತ್ರರೊಂದಿಗಷ್ಟೇ ಹಬ್ಬ ಆಚರಿಸಿ. ಮಂದಿರ-ಮಸೀದಿಗೇ ಹೋಗಿ ಪ್ರಾರ್ಥಿಸಬೇಕು, ಆಡಂಬರದಿಂದಲೇ ಹಬ್ಬ ಆಚರಿಸಬೇಕು ಎಂದು ಯಾವ ಧರ್ಮ-ದೇವರೂ ಹೇಳಲ್ಲ ಎಂಬುದಾಗಿ ಅವರು ಹೇಳಿದ್ದಾರೆ.
‘ನಿಮ್ಮ ಗುರಿ ಮೇಲೆ ಗಮನವಿಡಿ’ ಎಂದು ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ್ದಾನೆ. ಈಗ ನನ್ನ ಗುರಿ, ನಿಮ್ಮ ಗುರಿ ಎರಡೂ ಒಂದೇ. ಕೋವಿಡ್ ಸೋಂಕನ್ನು ಇಲ್ಲವಾಗಿಸುವುದು ಈಗ ನಮ್ಮ ಗುರಿ, ಇದೇ ನಮ್ಮ ಧರ್ಮ ಎಂಬುದಾಗಿ ಸಚಿವರು ಮನವಿ ಮಾಡಿಕೊಂಡಿದ್ದಾರೆ.