ಬೆಂಗಳೂರು: ಮಗಳ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ಸಂಭ್ರಮದಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಡಿಕೆಶಿ ಮಗಳು ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಮಾಲೀಕರಾಗಿದ್ದ ಸಿದ್ಧಾರ್ಥ್ ಹೆಗ್ಡೆ ಪುತ್ರ ಅಮರ್ತ್ಯ ಅವರ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ಗುರುವಾರ(ನ.19) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಖಾಸಗಿ ಹೋಟೆಲ್ನಲ್ಲಿ ನೆರವೇರಿತು. ಅದೇ ದಿನ ಡಿಕೆಶಿ ಕಚೇರಿಗೆ ಸಿಬಿಐ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಡಿ.ಕೆ.ಶಿವಕುಮಾರ್ಗೆ ಸೂಚಿಸಿದೆ.
ಸಿಬಿಐ ಸಮನ್ಸ್ ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆಶಿ, ಸಿಬಿಐನಿಂದ ಸಮನ್ಸ್ ಬಂದಿರುವುದು ನಿಜ. ನ.19ನೇ ತಾರೀಖು ನಮ್ಮ ಕಚೇರಿಗೆ ಬಂದು ಸಮನ್ಸ್ ಕೊಟ್ಟಿದ್ದು, ನ.23ಕ್ಕೆ ಹಾಜರಾಗುವಂತೆ ಹೇಳಿದ್ದಾರೆ. ನಾಳೆಯಿಂದ(ನ.23) ನಾನು ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿರುವೆ. ವಾಪಸ್ ಬೆಂಗಳೂರಿಗೆ ನಾನು ಬರೋದು ನ.25ರ ಬೆಳಗ್ಗೆ. ಹಾಗಾಗಿ ಸಿಬಿಐ ಅಧಿಕಾರಿಗೆ ಕರೆ ಮಾಡಿ ಮನವಿ ಮಾಡಿದ್ದೇನೆ. ನ.25ರ ಮಧ್ಯಾಹ್ನ 4 ಗಂಟೆಗೆ ಸಿಬಿಐ ಕಚೇರಿಗೆ ಹಾಜರಾಗುವುದಾಗಿ ಹೇಳಿದ್ದೇನೆ. ಓಕೆ ಅಂತ ಹೇಳಿದ್ದಾರೆ ಎಂದು ವಿವರಿಸಿದರು.
ಕಳೆದ ಅಕ್ಟೋಬರ್ 5ರಂದು ಡಿಕೆಶಿ ಬ್ರದರ್ಸ್ಗೆ ಸೇರಿದ ಬೆಂಗಳೂರು ಮತ್ತು ದೆಹಲಿ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿತ್ತು. 75 ಕೋಟಿ ಮೌಲ್ಯದ ಆಸ್ತಿ ದಾಖಲೆ ಹೊಂದಾಣಿಕೆ ಇಲ್ಲ ಎಂದು ಸಿಬಿಐ ಹೇಳಿತ್ತು. ಆದಾಯಕ್ಕಿಂತಲೂ ಅಧಿಕ ಆಸ್ತಿ ಗಳಿಕೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್ ಜಾರಿ ಮಾಡಿದೆ.
ನಾನು ಬೀದಿಗೆ ಬಂದಿರುವೆ, ನನ್ನ ಕೈ ಹಿಡಿಯಿರಿ… ಎಂದು ಬೇಡಿದ ಅಖಂಡ ಶ್ರೀನಿವಾಸ ಮೂರ್ತಿ
ಡಿಕೆಶಿ ಪುತ್ರಿ, ಎಸ್.ಎಂ.ಕೃಷ್ಣ ಮೊಮ್ಮಗನ ನಿಶ್ಚಿತಾರ್ಥ; ಗಣ್ಯರನೇಕರ ಉಪಸ್ಥಿತಿ, ಹಾರೈಕೆ