ಶಿವಮೊಗ್ಗ: ಸಿಬಿಎಸ್ಇ ಶಾಲೆಗಳ ಒಕ್ಕೂಟ ಸಹ್ಯಾದ್ರಿ ಸಹೋದಯ ಸ್ಕೂಲ್ ಕಾಂಪ್ಲೆಕ್ಸ್ನಿಂದ ನ.18ರ ಬೆಳಗ್ಗೆ 9ಕ್ಕೆ ಭದ್ರಾವತಿ ಗಾಂಧಿ ನಗರದ ಸೇಂಟ್ ಜೋಸೆಫ್ ಶಾಲೆಯಲ್ಲಿ ಅಧ್ಯಯನ-4 ಶಿಕ್ಷಕರ ವಾರ್ಷಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಹ್ಯಾದ್ರಿ ಸಹೋದಯದ ಕಾರ್ಯದರ್ಶಿ ಸುಕೇಶ್ ಸೇರಿಗಾರ್ ತಿಳಿಸಿದ್ದಾರೆ.
ಸಮ್ಮೇಳನವನ್ನು ಇಸ್ರೋದ ನಿವೃತ್ತ ವಿಜ್ಞಾನಿ, ಪದ್ಮಭೂಷಣ ಪುರಸ್ಕೃತ ಡಾ. ಬಿ.ಎನ್.ಸುರೇಶ್ ಉದ್ಘಾಟಿಸಲಿದ್ದಾರೆ. ಸೇಂಟ್ ಜೋಸೆಫ್ ಶಾಲೆ ಕಾರ್ಯದರ್ಶಿ ರಾಬರ್ಟ್ ಡಿಸೋಜ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಿಬಿಎಸ್ಇ ಶಾಲೆಗಳ ಶಿಕ್ಷಕರು ಹಾಗೂ ಪ್ರಾಚಾರ್ಯರಿಗೆ ವಿವಿಧ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮೂರು ಅವಧಿಯಲ್ಲಿ ಉಪನ್ಯಾಸ ನೀಡಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಿಕ್ಷಣದ ಮರುವ್ಯಾಖ್ಯಾನ ಎಂಬ ವಿಷಯದ ಕುರಿತು ಸೈಯದ್ ಸುಲ್ತಾನ್ ಅಹಮದ್, ತರಗತಿಯಲ್ಲಿ ಪರಿಣಾಮಕಾರಿ ಕಲಿಕೆ ಎಂಬ ವಿಷಯದ ಬಗ್ಗೆ ಅಜೀಂ ಪ್ರೇಮ್ಜೀ ಫೌಂಡೇಷನ್ನ ಎಸ್.ಗಿರಿಧರ್ ಮಾತನಾಡಲಿದ್ದಾರೆ. ಮಧ್ಯಾಹ್ನ 3ಕ್ಕೆ ನಡೆಯುವ ಸಮಾರೋಪದಲ್ಲಿ ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಪ್ರೊ. ರಹಮತ್ ತರೀಕೆರೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
22 ಸಿಬಿಎಸ್ಇ ಶಾಲೆಗಳು ಸಹ್ಯಾದ್ರಿ ಸಹೋದಯದಲ್ಲಿ ನೋಂದಣಿ ಮಾಡಿಕೊಂಡಿವೆ. ನಮ್ಮ ಸಂಘಟನೆಗೆ ಸರ್ಕಾರ ಮಾನ್ಯತೆ ನೀಡಿದೆ. ಮಕ್ಕಳಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವುದು, ಶಿಕ್ಷಕರ ಬೌದ್ಧಿಕ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಾಗಾರಗಳನ್ನು ಆಯೋಜಿಸುವುದು ನಮ್ಮ ಸಂಘಟನೆಯ ಪ್ರಮುಖ ಉದ್ಧೇಶವಾಗಿದೆ. ನ.18ರ ಕಾರ್ಯಾಗಾರದಲ್ಲಿ ಸುಮಾರು 1,200 ಶಿಕ್ಷಕರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಸಹ್ಯಾದ್ರಿ ಸಹೋದಯದ ಅಧ್ಯಕ್ಷೆ ನವೀನಾ ಎಂ.ಪಾಯಸ್, ಸಂಸ್ಥಾಪಕ ಅಧ್ಯಕ್ಷ ಶ್ರೀಕಾಂತ್ ಹೆಗ್ಡೆ, ಸಾರ್ವಜನಿಕ ಸಂಪರ್ಕಾಧಿಕಾರಿ ಲತಾ ರಾಬರ್ಟ್ ಇದ್ದರು.