ನವದೆಹಲಿ: ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕುಗಳ ಒಕ್ಕೂಟಕ್ಕೆ ವಂಚನೆ ಮಾಡಿದ ಆರೋಪದ ಮೇಲೆ ಐಸ್ಕ್ರೀಮ್ ತಯಾರಿಕಾ ಕ್ವಾಲಿಟಿ ಲಿಮಿಟೆಡ್ ಕಂಪನಿ ವಿರುದ್ಧ ಸಿಬಿಐ ಸೋಮವಾರ ವಂಚನೆ ಪ್ರಕರಣ ದಾಖಲಿಸಿದೆ.
ಕ್ವಾಲಿಟಿ ಕಂಪನಿಯು ಸುಮಾರು 1,400 ಕೋಟಿ ರೂ. ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಬ್ಯಾಂಕ್ ಆಫ್ ಇಂಡಿಯಾ ದೂರು ನೀಡಿದ ಬಳಿಕ ತನಿಖಾ ಸಂಸ್ಥೆ ದೂರು ದಾಖಲಿಸಿಕೊಂಡಿದ್ದು, ದೆಹಲಿ, ಬುಲಂದ್ಶಹರ್, ಶಹರನ್ಪುರ್, ಅಜ್ಮೇರ್ ಮತ್ತು ಪಲ್ವಾಲ್ ಸೇರಿದಂತೆ ಐಸ್ಕ್ರೀಮ್ ಕಂಪನಿಗೆ ಸಂಬಂಧಿಸಿದ ಎಂಟು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ಇದನ್ನೂ ಓದಿ: ಡೇಟಿಂಗ್ ಆ್ಯಪ್ ವಿರುದ್ಧ ತಿರುಗಿಬಿದ್ದ ನಟಿ, ಟಿಎಂಸಿ ಸಂಸದೆ ನುಸ್ರತ್ ಜಹಾನ್..!
ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಕಂಪನಿಯ ನಿರ್ದೇಶಕರಾದ ಸಂಜಯ್ ಧಿಂಗ್ರ, ಸಿದ್ಧಂತ್ ಗುಪ್ತಾ ಮತ್ತು ಅರುಣ್ ಶ್ರೀವಾತ್ಸವ ಹೆಸರು ಉಲ್ಲೇಖವಾಗಿದ್ದು, ಇತರೆ ಅಪರಿಚಿತರ ಹೆಸರು ಕೂಡ ಕೇಳಿಬಂದಿದೆ.
ಕ್ವಾಲಿಟಿ ಕಂಪನಿಯೂ ಬ್ಯಾಂಕ್ ನಿಧಿಗಳನ್ನು ಬೇರೆಡೆ ತಿರುಗಿಸುವುದು, ಸಂಬಂಧಿತ ಪಕ್ಷಗಳಿಗೆ ಅಕ್ರಮ ಹಣ ವರ್ಗಾವಣೆ, ನಕಲಿ ದಾಖಲೆ ಮತ್ತು ರಶೀದಿ ಹಾಗೂ ಸುಳ್ಳು ಲೆಕ್ಕಪತ್ರಗಳು ಮತ್ತು ನಕಲಿ ಸ್ವತ್ತುಗಳನ್ನು ನಿರ್ಮಿಸುವುದು ಸೇರಿದಂತೆ ಅನೇಕ ಮಾರ್ಗದಲ್ಲಿ ವಂಚನೆ ಎಸಗಿದೆ ಎಂದು ಬ್ಯಾಂಕ್ ಆಫ್ ಇಂಡಿಯಾ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬಾಂಕುಗಳ ಒಕ್ಕೂಟದಲ್ಲಿ ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಐಡಿಬಿಐ, ಸೆಂಟ್ರಲ್ ಬ್ಯಾಂಕ್ ಇಂಡಿಯಾ, ಧನಲಕ್ಷ್ಮೀ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ಗಳು ಒಳಗೊಂಡಿವೆ. (ಏಜೆನ್ಸೀಸ್)