ಚೆನ್ನೈ: ಕೆಆರ್ಎಸ್ ಅಣೆಕಟ್ಟಿನಿಂದ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಬುಧವಾರ ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಿದ್ದು, ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಬಹುಕೋಟಿ ವೆಚ್ಚದಲ್ಲಿ ಅಣೆಕಟ್ಟು ನಿರ್ಮಾಣ ಮಾಡುವ ಕರ್ನಾಟಕ ಸರ್ಕಾರದ ಯೋಜನಾ ಪ್ರಸ್ತಾವನೆಯನ್ನು ಸಹ ಮುಂದೂಡಿದೆ.
ಕಾವೇರಿ ನ್ಯಾಯಮಂಡಳಿಯ ತೀರ್ಪನ್ನು ಸುಪ್ರೀಂಕೋರ್ಟ್ ಬದಲಾಯಿಸಿದ್ದರ ಅನುಗುಣವಾಗಿ ಜೂನ್ ತಿಂಗಳಲ್ಲಿ 9.19 ಮತ್ತು ಜುಲೈನಲ್ಲಿ 31.24 ಟಿಎಂಸಿ ನೀರನ್ನು ಸರ್ಕಾರ ತಮಿಳುನಾಡಿಗೆ ಹರಿಸಬೇಕಾಗಿದೆ. ಇನ್ನು ತಮಿಳುನಾಡು ಮತ್ತು ಪುದುಚೇರಿಯಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕನಕಪುರದ ಮೇಕೆದಾಟುವಿನಲ್ಲಿ ಬಹುಕೋಟಿ ವೆಚ್ಚದಲ್ಲಿ ಡ್ಯಾಂ ನಿರ್ಮಾಣ ಮಾಡುವ ಪ್ರಸ್ತಾವನೆಗೂ ಪ್ರಾಧಿಕಾರ ಬ್ರೇಕ್ ಹಾಕಿದೆ.
ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ತಮಿಳುನಾಡು ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ, ಮೇಕೆದಾಟು ವಿಚಾರವು ವಿಚಾರಣಾಧೀನ ನ್ಯಾಯಲಯದಲ್ಲಿರುವುದರಿಂದ ಇದರ ಮಧ್ಯೆ ಯಾವುದೇ ಅಜೆಂಡಾ ತರದಂತೆ ಜಲಶಕ್ತಿ ಸಚಿವಾಲಯಕ್ಕೆ ಸೂಚನೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಂತೆ 2018ರಲ್ಲಿ ರಚನೆಯಾದ ಕಾವೇರಿ ನೀರು ನಿರ್ವಾಹಣಾ ಪ್ರಾಧಿಕಾರದಿಂದ ಈವರೆಗೂ 6 ಸಭೆಗಳು ನಡೆದಿದ್ದು, ಇತ್ತೀಚೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಪ್ರಾಧಿಕಾರ ಪ್ರತಿನಿಧಿಸುವ ನದಿತೀರದ ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಜೂನ್ 12ಕ್ಕೆ ಮೆಟ್ಟೂರ್ ಡ್ಯಾಂ ತೆರೆಯುವ ತಮಿಳುನಾಡು ಪ್ರಸ್ತಾವನೆಯನ್ನು ಪ್ರಾಧಿಕಾರ ಒಪ್ಪಿಕೊಂಡಿದೆ.
ನದಿಯಲ್ಲಿನ ನೀರಿನ ಹರಿವು ಸಾಮಾನ್ಯವಾಗಿದ್ದರೆ ಜೂನ್ ಮತ್ತು ಜುಲೈ ತಿಂಗಳಿಗೆ ತಮಿಳುನಾಡಿಗೆ 40 ಟಿಎಂಸಿ ನೀರು ಬಿಡಬೇಕೆಂಬ ಸುಪ್ರೀಂಕೋರ್ಟ್ನ ಆದೇಶದಂತೆ ಕರ್ನಾಟಕವು ಬಿಲಿಗುಂಡ್ಲು (ಅಂತರ ರಾಜ್ಯ ಗಡಿ)ವಿನಿಂದ ನೀರು ಬಿಡುಗಡೆ ಮಾಡಬೇಕು ಎಂದು ಪ್ರಾಧಿಕಾರ ನಿರ್ದೇಶಿಸಿರುವುದಾಗಿ ಪ್ರಾಧಿಕಾರದ ಅಧ್ಯಕ್ಷ ರಾಜೇಂದ್ರ ಕುಮಾರ್ ಜೈನ್ ತಿಳಿಸಿದ್ದಾರೆ.
ಮೇಕೆದಾಟು ಯೋಜನೆಯನ್ನು ಮತ್ತೆ ಮುಂದೂಡಲಾಗಿದೆ. ನಾವಿನ್ನೂ ಅದರ ಬಗ್ಗೆ ನಿರ್ಧಾರ ಮಾಡಿಲ್ಲ ಜೈನ್ ಸ್ಪಷ್ಟನೆ ನೀಡಿದರು. ಇದಕ್ಕೂ ಮುನ್ನ ತಮಿಳುನಾಡು ಸರ್ಕಾರ ಈ ಯೋಜನೆಯ ಮಧ್ಯೆ ಅಜೆಂಡಾ ತರದಂತೆ ಪ್ರಧಾನಿಗೆ ಪತ್ರ ಬರೆದಿದೆ. ಇತ್ತ ಕರ್ನಾಟಕವು ಸಹ ಆದಷ್ಟು ಬೇಗ ಯೋಜನೆಗೆ ಇರುವ ತೊಂದರೆಯನ್ನು ನಿವಾರಿಸಬೇಕೆಂದು ಕೇಂದ್ರದ ಮುಂದೆ ಬೇಡಿಕೆ ಇಟ್ಟಿದೆ. ಕರ್ನಾಟಕವು ಕಳೆದ ವರ್ಷವೇ ಯೋಜನಾ ವರದಿಯನ್ನು ಸಲ್ಲಿಸಿದೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿನ ಪ್ರತಿಭಟನೆಯಿಂದಾಗಿ ಯೋಜನೆಯನ್ನು ಮುಂದೂಡಲಾಗಿದೆ. (ಏಜೆನ್ಸೀಸ್)