ಶಿವಮೊಗ್ಗ: ನಗರದ ಹೊರವಲಯದ ನಿದಿಗೆ ಕೆರೆ ಬಳಿ ಸೋಮವಾರ ಬೆಳಗ್ಗೆ ಕಾರುಗಳ ಮುಖಾಮುಖಿ ಡಿಕ್ಕಿಯಾಗಿ ಮಾಚೇನಹಳ್ಳಿಯ ಕಾರ್ಖಾನೆಗೆ ತೆರಳುತ್ತಿದ್ದ ಸಹಾಯಕ ಮ್ಯಾನೇಜರ್ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೊಂದು ಕಾರಿನಲ್ಲಿ ಹೊನ್ನಾಳಿ ತಾಲೂಕಿನ ಉಕ್ಕುಡಗತ್ರಿಗೆ ತೆರಳುತ್ತಿದ್ದ ನಾಲ್ವರು ಗಾಯಗೊಂಡಿದ್ದಾರೆ.
ಶಾಂತಾಲಾ ಇಂಡಿಸ್ಟ್ರೀಸ್ನ ಕಾರ್ಖಾನೆಯೊಂದರ ಸಹಾಯಕ ಮ್ಯಾನೇಜರ್, ಶಿವಮೊಗ್ಗ ನಗರದ ನಿವಾಸಿ ಎಲ್.ಎಸ್.ಮೇಘರಾಜ್ (42) ಮೃತರು. ಮೇಘರಾಜ್ ಎಂದಿನಂತೆ ಬೆಳಗ್ಗೆ 8.30ರ ಸುಮಾರಿಗೆ ತಮ್ಮ ಕಾರಿನಲ್ಲಿ ಕಾರ್ಖಾನೆಗೆ ತೆರಳುತ್ತಿದ್ದಾಗ ನಿದಿಗೆ ಕೆರೆಯ ಕ್ರಾಸ್ ಬಳಿ ಎದುರಿನಿಂದ ಒನ್ವೇನಲ್ಲಿ ಕಾರು ಬಂದಿದ್ದು ಮುಖಾಮುಖಿ ಡಿಕ್ಕಿಯಾಗಿವೆ.
ಎರಡು ಕಾರುಗಳು ಜಖಂಗೊಂಡಿದ್ದು ಮೇಘರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಂದು ಕಾರಿನಲ್ಲಿದ್ದ ಚಿಕ್ಕಮಗಳೂರು ಜಿಲ್ಲೆ ಲಿಂಗದಹಳ್ಳಿಯಿಂದ ಉಕ್ಕುಡುಗಾತ್ರಿ ದೇವಸ್ಥಾನಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ ನಾಲ್ವರು ಗಾಯಗೊಂಡಿದ್ದಾರೆ. ಒಬ್ಬರ ಮೂಳೆ ಮುರಿದಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.