ಚೆನ್ನೈ: ವಿಚಾರಣೆ ಮತ್ತು ಪರಿಶೀಲನೆಗಾಗಿ ಜನವರಿ 6ರಂದು ಕೋರ್ಟ್ ಗೆ ಹಾಜರಾಗಬೇಕು ಎಂದು ಕುಂಭಕೋಣಂನ ಅಧೀನ ನ್ಯಾಯಾಲಯವು ತಿರುಪುರ ಜಿಲ್ಲೆಯ ಸಿವಿರಿಪಾಲಯಂನ ಪರಸಿವನ್ ಸ್ವಾಮಿ ದೇವಸ್ಥಾನದ ದೇವರಿಗೆ ಸಮನ್ಸ್ ಜಾರಿಗೊಳಿಸಿದ ವಿರಳ ವಿದ್ಯಮಾನ ಬೆಳಕಿಗೆ ಬಂದಿದೆ. ಈ ಸಮನ್ಸ್ ವಿಚಾರ ಮದ್ರಾಸ್
ಹೈಕೋರ್ಟ್ ಗೆ ತಲುಪಿದ್ದು, ನ್ಯಾಯಮೂರ್ತಿ ಆರ್ ಸುರೇಶ್ ಕುಮಾರ್ ಅಧೀನ ನ್ಯಾಯಾಲಯದ ಕ್ರಮದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.
ಕಳವಾಗಿದ್ದ ಮೂಲ ವಿಗ್ರಹ ದೇವಸ್ಥಾನಕ್ಕೆ ಮತ್ತೆ ಸಿಕ್ಕಿದ್ದು, ಆಗಮ ಶಾಸ್ತ್ರಾನು ಸಾರ ಪುನರ್ ಪ್ರತಿಷ್ಠಾಪನೆ ಮಾಡ ಲಾಗಿತ್ತು. ಕಳುವಾಗಿರುವ ವಿಗ್ರಹಗಳ ಕೇಸ್ ವಿಚಾರಣೆ ನಡೆಸುತ್ತಿದ್ದ ಕುಂಭಕೋಣಂ ಅಧೀನ ನ್ಯಾಯಾಲಯ, ವಿಗ್ರಹ ಪರಿಶೀಲನೆಗಾಗಿ ಮೂಲ ದೇವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಅಲ್ಲದೆ, ವಿಗ್ರಹವನ್ನು ಪೀಠದಿಂದ ಮೇಲೆತ್ತಿ ಕೋರ್ಟ್ ಗೆ ಹಾಜರುಪಡಿಸುವಂತೆ ಸಮನ್ಸ್ ನಲ್ಲಿ ಸೂಚಿಸಿತ್ತು. ಈ ಕುರಿತು ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ಆರ್ ಸುರೇಶ್ ಕುಮಾರ್, ಅಧೀನ ನ್ಯಾಯಾಲಯದ ಸಮನ್ಸ್ ಗೆ ತಡೆ ನೀಡಿ, ದೇವರಿಗೆ ಸಮನ್ಸ್ ಜಾರಿಗೊಳಿಸುವುದು ಸಾಧ್ಯವಿಲ್ಲ. ಮೂಲ ವಿಗ್ರಹವನ್ನು ಪೀಠದಿಂದ ಕದಲಿಸಬೇಕಾದ್ದಿಲ್ಲ ಎಂದು ಮಧ್ಯಂತರ ಆದೇಶ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಲು ನಾಲ್ಕುವಾರಗಳ ಕಾಲಾವಕಾಶವನ್ನೂ ಕೊಟ್ಟರು.
ಏನಿದು ಪ್ರಕರಣ?
ದೇವಸ್ಥಾನದ ಪುರಾತನ ವಿಗ್ರಹ ಕಳುವಾಗಿತ್ತು. ಪೊಲೀಸರು ಇದನ್ನು ಪತ್ತೆ ಹಚ್ಚಿ, ಕೋರ್ಟ್ ಗೆ ಹಾಜರುಪಡಿಸಿದ್ದರು. ಬಳಿಕ ಈ ವಿಗ್ರಹವನ್ನು ದೇವಸ್ಥಾನದ ಆಡಳಿತ ಮಂಡಳಿಗೆ ಕೋರ್ಟ್ ಹಸ್ತಾಂತರಿಸಿತ್ತು. ವಿಗ್ರಹ ಪುನರ್ ಪ್ರತಿಷ್ಠಾಪನೆ ನಡೆಸಿ, ಕುಂಭಾಭಿಷೇಕ ನೆರವೇರಿಸಲಾಗಿತ್ತು. ಸದ್ಯ ಈ ದೇವರ ವಿಗ್ರಹಕ್ಕೆ ನಿತ್ಯ ಪೂಜೆ ನಡೆಯುತ್ತಿದೆ. ಸಾವಿರಾರು ಭಕ್ತರು ಈ ದೇವರನ್ನು ಪೂಜಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಗ್ರಹ ಕಳವು ಕೇಸ್ ವಿಚಾರಣೆ ನಡೆಸುವ ನ್ಯಾಯಾಂಗ ಅಧಿಕಾರಿಯು ಈ ವಿಗ್ರಹವನ್ನು ಮತ್ತೆ ಕೋರ್ಟ್ ಎದುರು ಜನವರಿ 6ರಂದು ಹಾಜರುಪಡಿಸಲು ಆದೇಶಿಸಿದ್ದರು.