ಸಿನಿಮಾ ಮಾಡಬೇಕು ಅಂತ ಹೊಸ ತಂಡಗಳು ಹೊಸ ಹುಮ್ಮಸ್ಸಿನಿಂದ ಚಿತ್ರರಂಗಕ್ಕೆ ಬರುತ್ತವೆ. ಕೆಲವರು ಸಕ್ಸಸ್ ಆಗುತ್ತಾರೆ, ಕೆಲವರು ಅರ್ಧಕ್ಕೆ ಕೈಸುಟ್ಟುಕೊಂಡು ಸುಮ್ಮನಾಗಿಬಿಡುತ್ತಾರೆ. ಮುಹೂರ್ತಕ್ಕೇ ಸುಸ್ತಾಗಿ ವಾಪಸ್ ಹೋದವರಿಗೂ ಕಡಿಮೆ ಇಲ್ಲ. ಹೀಗಿರುವಾಗ ೨೦೧೭ರಲ್ಲೇ ಚಿತ್ರೀಕರಣ ಪ್ರಾರಂಭಿಸಿ, ೨೦೧೯ರಲ್ಲಿ ಶೂಟಿಂಗ್ ಪೂರ್ಣಗೊಳಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಬೇಕು ಎನ್ನುವಷ್ಟರಲ್ಲಿ ಕೊರೋನಾ ಸಂಕಷ್ಟ ಎದುರಾದ ಕಾರಣ ಅಲ್ಲಿಗೇ ಸ್ಥಗಿತಗೊಂಡಿತ್ತು. ಆದರೆ ಎದೆಗುಂದದ ಚಿತ್ರತಂಡ ಈಗ ಎಲ್ಲ ಕೆಲಸಗಳನ್ನೂ ಮುಗಿಸಿಕೊಂಡು ನಾಳೆ ತೆರೆಗೆ ಬರಲು ರೆಡಿಯಾಗಿದೆ.
ಹೌದು, ಶ್ರೀನಿವಾಸ್ ಎಸ್ಬಿ ನಿರ್ದೇಶನದ `ಬೈಪಾಸ್ ರೋಡ್’ ನಾಳೆ ಜುಲೈ ೨೯ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಕುರಿತು ಕೆಲವು ದಿನಗಳ ಹಿಂದಷ್ಟೇ ಪತ್ರಿಕಾಗೋಷ್ಠಿ ಆಯೋಜಿಸಿದ್ದ ಚಿತ್ರತಂಡದ ಕೆಲವರು, ಹಲವು ಕಲಾವಿದರು ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಎಂ.ಬಿ. ಪ್ರೊಡಕ್ಷನ್ಸ್ ಅಡಿಲ್ಲಿ ಭರತ್ ರಾಜ್ ಮತ್ತು ಮಹೇಶ್ ಜತೆಗೂಡಿ ಈ ಚಿತ್ರಕ್ಕೆ ಹಣ ಹಾಕಿದ್ದಾರೆ. ಭರತ್ ಕುಮಾರ್, ಚಿಕ್ಕಣ್ಣ, ತಿಲಕ್, ನೀತೂ ಗೌಡ, ನೇಹಾ ಸಕ್ಸೇನಾ, ಉದಯ್, ಮಾಸ್ಟರ್ ಆನಂದ್, ತಬಲ ನಾಣಿ, ಉಗ್ರಂ ಮಂಜು, ಕುರಿಬಾಂಡ್ ರಂಗ ಚಿತ್ರದ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ವಿಜಯ್ ಕೃಷ್ಣ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣವಿದೆ.
ಪತ್ರಿಕಾಗೋಷ್ಠಿಯಲ್ಲಿ ಮೊದಲು ಮಾತನಾಡಿದ ನಿರ್ದೇಶಕ ಶ್ರೀನಿವಾಸ್, `ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ. ಹನಿಮೂನ್ಗೆ ಹೊರಟ ನವ ದಂಪತಿಗೆ `ಬೈಪಾಸ್ ರೋಡ್’ನಲ್ಲಿ ಅನಿರೀಕ್ಷಿತ ಘಟನೆಗಳು ಎದುರಾಗುತ್ತವೆ. ಅದರಿಂದ ಅವರು ಹೇಗೆ ಹೊರಬರುತ್ತಾರೆ? ಮುಂದೇನಾಗುತ್ತದೆ? ಎಂಬುದೇ ಚಿತ್ರದ ಕಥೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು. ನಂತರ ಮಾತನಾಡಿದ ನಿರ್ಮಾಪಕ ಭರತ್ ರಾಜ್, `೨೦೧೯ರಲ್ಲೇ ಚಿತ್ರೀಕರಣ ಪೂರ್ಣಗೊಂಡಿದ್ದರೂ ಕರೋನಾ ಹೊಸ ಹೊಸ ಅಲೆಗಳು ಮತ್ತು ಲಾಕ್ಡೌನ್ ಆತಂಕದಿAದ ಅಂದುಕೊAಡ ಸಮಯಕ್ಕೆ ರಿಲೀಸ್ ಮಾಡಲು ಸಾಧ್ಯವಾಗಲಿಲ್ಲ. ಈಗ ಜುಲೈ ೨೯ರಂದು ರಿಲೀಸ್ ಮಾಡುತ್ತಿದ್ದೇವೆ’ ಎಂದರು. ನಂತರ ಮಾತನಾಡಿದ ನಾಯಕ ಭರತ್ ಕುಮಾರ್, `ಇಡೀ ಸಿನಿಮಾದಲ್ಲಿ ತಿರುವು ಕೊಡುವ ಸಾಕಷ್ಟು ಸಸ್ಪೆನ್ಸ್ ಅಂಶಗಳಿರುವ ಪಾತ್ರದಲ್ಲಿ ನಾನು ನಟಿಸಿದ್ದೇನೆ. ಇವತ್ತಿನ ಯುವಪೀಳಿಗೆಗೆ ಇಷ್ಟವಾಗುವ ಸಬ್ಜೆಕ್ಟ್ ಸಿನಿಮಾದಲ್ಲಿದೆ’ ಎಂದು ಮಾಹಿತಿ ಹಂಚಿಕೊoಡರು. ಮಯೂರ ಪಿಕ್ಚರ್ಸ್ ಮೂಲಕ ಸತ್ಯ ಪ್ರಕಾಶ್ ಮತ್ತು ಮಂಜುನಾಥ್ `ಬೈಪಾಸ್ ರೋಡ್’ ವಿತರಣೆಯ ಜವಾಬ್ದಾರಿ ಹೊತ್ತಿದ್ದಾರೆ.