ಬೆಂಗಳೂರು: ಬಸ್ನಲ್ಲಿ ಪರ್ಸ್ ಕಾಣೆಯಾಗುವುದು, ಬಸ್ ನಿಲ್ದಾಣದಲ್ಲಿ ಬ್ಯಾಗ್ ಕಳೆದುಹೋಗುವುದು ಮಾತ್ರವಲ್ಲ ಬಸ್ ಮಿಸ್ ಆಗಿದ್ದನ್ನೂ ಕೇಳಿದ್ದೇವೆ. ಆದರೆ ಇದೀಗ ಬಸ್ ನಿಲ್ದಾಣವೇ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಚ್ಚರಿ ಎಂದರೆ ಹೀಗೆ ಬಸ್ ಸ್ಟ್ಯಾಂಡ್ ನಾಪತ್ತೆಯಾದ ತಿಂಗಳ ಬಳಿಕ ದೂರು ದಾಖಲಾಗಿದೆ.
ಆಯುಕ್ತರ ಕಚೇರಿ ಹಿಂಭಾಗದಲ್ಲಿ ಇರುವ ಕನ್ನಿಂಗ್ಹ್ಯಾಮ್ ರಸ್ತೆಯ ಕಾಫಿ ಡೇ ಎದುರು 10 ಲಕ್ಷ ರೂ. ವೆಚ್ಚದಲ್ಲಿ ಬಿಬಿಎಂಪಿಯಿಂದ ಸ್ಟೇನ್ ಲೆಸ್ ಸ್ಟೀಲ್ನಲ್ಲಿ ಈ ಬಸ್ ತಂಗುದಾಣ ನಿರ್ಮಿಸಲಾಗಿತ್ತು. ಆದರೆ ದುಷ್ಕರ್ಮಿಗಳು ಆ ಶೆಲ್ಟರ್ ಫ್ರೇಮನ್ನೇ ಕಳವು ಮಾಡಿದ್ದಾರೆ.
ಆ.21ರಂದು ಈ ಶೆಲ್ಟರ್ ನಿರ್ಮಾಣಗೊಂಡಿತ್ತು. ಆದರೆ ಕಳ್ಳರ ಗುಂಪೊಂದು ಇದನ್ನು ಕತ್ತರಿಸಿಕೊಂಡು ಹೋಗಿದ್ದು, ಆ.28ರಂದು ಈ ಪ್ರಕರಣ ಬೆಳಕಿಗೆ ಬಂದಿತ್ತು. ಬಿಎಂಟಿಸಿಗೆ ಈ ಬಸ್ ನಿಲ್ದಾಣಗಳನ್ನು ನಿರ್ಮಿಸಿಕೊಡುವ ಸೈನ್ಪೋಸ್ ಇಂಡಿಯಾ ಕಂಪನಿಯ ಉಪಾಧ್ಯಕ್ಷ ಎನ್.ರವಿ ರೆಡ್ಡಿ ಈ ಕುರಿತು ಹೈಗ್ರೌಂಡ್ಸ್ ಠಾಣಾ ಪೊಲೀಸರಿಗೆ ಸೆ. 30ರಂದು ದೂರು ನೀಡಿದ್ದಾರೆ.
ಹಾಗಂತ ರಾಜಧಾನಿ ಬೆಂಗಳೂರಿನಲ್ಲಿ ಇದೊಂದೇ ಪ್ರಕರಣವಲ್ಲ, ಬಸ್ ನಿಲ್ದಾಣವನ್ನೇ ಕಳವು ಮಾಡಿರುವ ಇಂಥ ಅನೇಕ ಪ್ರಕರಣಗಳು ನಡೆದಿವೆ. ಎಚ್ಆರ್ಬಿಆರ್ ಲೇಔಟ್, ಕಲ್ಯಾಣನಗರ, ದೂಪನಹಳ್ಳಿ ಮತ್ತು ಬಿಎಎಂಎಲ್ ಲೇಔಟ್, ರಾಜರಾಜೇಶ್ವರಿನಗರದಲ್ಲೂ ಬಸ್ ನಿಲ್ದಾಣಗಳು ನಾಪತ್ತೆ ಆಗಿವೆ ಎಂಬುದೂ ಬೆಳಕಿಗೆ ಬಂದಿವೆ. ಇವೆಲ್ಲವೂ ಒಂದೇ ಕಳ್ಳ ಗ್ಯಾಂಗ್ನ ಕೃತ್ಯವೇ ಅಥವಾ ಇದರ ಹಿಂದೆ ಭ್ರಷ್ಟಾಚಾರದ ನೆರಳಿದೆಯೇ ಎಂಬ ಅನುಮಾನಗಳು ಮೂಡಿವೆ.
ಇಬ್ಬರು ಮಕ್ಕಳನ್ನು ನೋಡಿಕೊಳ್ಳೋ ಆಯಾಗೆ 80 ಲಕ್ಷ ರೂ. ಸಂಬಳ ಕೊಡ್ತಾರಂತೆ!
ಹೊಸದೂ ಬೇಡ, ಹಳೇದೂ ಬೇಡ: ಏನಿದು ಮಹಿಳೆಯರ ಒತ್ತಾಯ?; ಮಾನಿನಿಯರು ಒಲಿಯದ ಏಕೈಕ ಭಾಗ್ಯ!