ಲಕ್ಷ್ಮೇಶ್ವರ: ತಾಲೂಕಿನ ಅಕ್ಕಿಗುಂದ- ಗೊಜನೂರ ಮಾರ್ಗದ ಹಳ್ಳದಲ್ಲಿ ಬಸ್ ಸಿಲುಕಿಕೊಂಡು ವಿದ್ಯಾರ್ಥಿಗಳು ರಸ್ತೆ ಮಧ್ಯೆ ಪರದಾಡಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ರಸ್ತೆ ಹದಗೆಟ್ಟಿದ್ದರಿಂದ ಒಂದು ವಾರದಿಂದ ಈ ಮಾರ್ಗದ ಬಸ್ ಬಂದ್ ಮಾಡಲಾಗಿತ್ತು. ಆದರೆ, ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗುರುವಾರವಷ್ಟೇ ಬಸ್ ಸಂಚಾರ ಪ್ರಾರಂಭಿಸಲಾಗಿತ್ತು.
ಅಕ್ಕಿಗುಂದ ಗ್ರಾಮದಿಂದ ನೂರಾರು ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಬಸ್ ಗೊಜನೂರ ಸಮೀಪದ ಹಳ್ಳದಲ್ಲಿ ಸಿಲುಕಿಕೊಂಡಿದೆ. ಚಾಲಕ ಏನೆಲ್ಲ ಸಾಹಸ ಮಾಡಿದರೂ ಬಸ್ ಮೇಲೇಳಲೇ ಇಲ್ಲ. ಇದರಿಂದ ಚಾಲಕ ಬಸ್ನಲ್ಲಿದ್ದ ವಿದ್ಯಾರ್ಥಿಗಳನ್ನು ಕೆಳಗಿಳಿಸಿದ್ದಾನೆ. ಅಲ್ಲಿಂದ 1 ಕಿ.ಮೀ. ದೂರ ನಡೆದುಕೊಂಡು ಹೋದ ವಿದ್ಯಾರ್ಥಿಗಳು ಗೊಜನೂರ ಗ್ರಾಪಂ ಮುಂದೆ ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟಿಸಿದರು.
ಗೊಜನೂರಿನ ಶಾಲೆಗಳಿಗೆ ಬರುವ ಶೆಟ್ಟಿಕೇರಿ, ಚನ್ನಪಟ್ಟಣ, ಅಕ್ಕಿಗುಂದ, ಅಕ್ಕಿಗುಂದ ತಾಂಡಾದ ನೂರಾರು ವಿದ್ಯಾರ್ಥಿಗಳು ತಮ್ಮ ಗೋಳು ಕೇಳೋರ್ಯಾರೂ ಇಲ್ಲ ಎಂದು ದುರ್ಗಮವಾದ ದಾರಿಯಲ್ಲಿ ನಡೆದುಕೊಂಡು ಹೋದರು.
ಸತತ ಮಳೆಯಿಂದಾಗಿ ತಾಲೂಕಿನಾದ್ಯಂತ ಕೆಲ ಕಡೆ ರಸ್ತೆಗಳು ಕೊಚ್ಚಿ ಹೋಗಿವೆ. ಮತ್ತೊಂದಿಷ್ಟು ಕಡೆ ರಸ್ತೆ ಮಾರ್ಗದ ಪರಸಿ, ಹಳ್ಳಗಳು ಕಿತ್ತು ಹೋಗಿದ್ದರಿಂದ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಪರಿಸ್ಥಿತಿ ನಿರ್ವಣವಾಗಿದೆ. ಸಾರಿಗೆ ಘಟಕದ ಅಧಿಕಾರಿಗಳು ಇಂತಹ ರಸ್ತೆಗಳಲ್ಲಿ ಬಸ್ ಸಂಚಾರ ಮಾಡುವುದಿಲ್ಲ ಎಂದು ಬಸ್ ನಿಲ್ದಾಣದಲ್ಲಿ ಬಹಿರಂಗವಾಗಿ ಫಲಕ ಪ್ರಕಟಿಸಿದ್ದಾರೆ.