ಬೆಂಗಳೂರು: ಮೀಸಲಾತಿ ಪ್ರಕಟ ಮಾಡಿದ ರಾಜ್ಯ ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬಂಜಾರ ಸಮುದಾಯದವರು ಪ್ರತಿಭಟನೆ ನಡೆಸಿದರು. ಈ ಕುರಿತಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದ್ದಾರೆ.
ನಗರದ ಮಾಳರಕೇರಿ ಬಡಾವಣೆಯಲ್ಲಿನ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನಿವಾಸದ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಯಡಿಯೂರಪ್ಪ ಜನ್ಮ ದಿನದ ಅಂಗವಾಗಿ ಶಿಕಾರಿಪುರ ತಾಲೂಕಿನಾದ್ಯಂತ ಸೀರೆ ವಿತರಣೆ ಮಾಡಲಾಗಿತ್ತು. ಇಂದು ಆ ಸೀರೆಗಳನ್ನು ಪ್ರತಿಭಟನೆಗೆ ತೆಗೆದುಕೊಂಡು ಬಂದ ಪ್ರತಿಭಟನಕಾರರು ಸೀರೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ವೈ ಅವರು, ” ಇವತ್ತು ಶಿಕಾರಿಪುರದಲ್ಲಿ ಕೆಲ ಬಂಜಾರ ಸಮುದಾಯದವರು ನಮ್ಮ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ನಾನು ಕೂಡಲೇ ಎಸ್ಪಿ ಅವರ ಬಳಿ ಮಾತನಾಡಿದ್ದೇನೆ. ಯಾರನ್ನೂ ಬಂಧಿಸಬೇಡಿ ಎಂದು ಎಸ್ಪಿಗೆ ಸೂಚಿಸಿದ್ದೇನೆ. ಇದರ ಹಿಂದೆ ಯಾರ ಕೈವಾಡವೂ ಇಲ್ಲ. ತಪ್ಪು ಗ್ರಹಿಕೆಯಿಂದಷ್ಟೇ ಈ ಘಟನೆ ಆಗಿದೆ ಪ್ರತಿಭಟನಾಕಾರರ ಮೇಲೆ ಯಾವುದೇ ಕ್ರಮ ಕೈಗೊಳ್ಳದಂತೆ ಇರಲು ಹೇಳಿದ್ದೇನೆ” ಎಂದಿದ್ದಾರೆ.
ಇದನ್ನೂ ಓದಿ: ಮೀಸಲಾತಿ ವಿರೋಧಿಸಿ ಭುಗಿಲೆದ್ದ ಹೋರಾಟ– ಬಿಎಸ್ವೈ ನಿವಾಸದ ಮೇಲೆ ಕಲ್ಲು ತೂರಾಟ
ಈ ಹಿಂದಿನಿಂದಲೂ ಬಂಜಾರ ಸಮುದಾಯದ ಜೊತೆ ಇದ್ದವನು ನಾನು. ಸಮುದಾಯಕ್ಕೆ ಸಿಗಬೇಕಾದ ನ್ಯಾಯಯುತ ಬೇಡಿಕೆ ಸರಿಪಡಿಸಲು ಪ್ರಯತ್ನಿಸುತ್ತೇನೆ. ತಾಂಡಾ ಅಭಿವೃದ್ಧಿಗಾಗಿ ನಿರಂತರ ಕೆಲಸ ಮಾಡಿದ್ದೇನೆ. ಈ ರೀತಿಯ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡದಂತೆ ಶಾಂತವಾಗಿ ವರ್ತಿಸಬೇಕು.ನಾಳೆ ಅಥವಾ ನಾಡಿದ್ದು ನಾನೇ ಹೋಗಿ ಅವರನ್ನ ಭೇಟಿಯಾಗುತ್ತೇನೆ. ನಂತರ ಈ ವಿಚಾರವಾಗಿ ಮಾತನಾಡುತ್ತೇನೆಂದು ಹೇಳಿದ್ದಾರೆ.
ಸಮುದಾಯದ ಬೇಡಿಕೆ ಬಗ್ಗೆ ಚರ್ಚಿಸಲು ನಾನು, ವಿಜಯೇಂದ್ರ 24 ಗಂಟೆಯೂ ಸಿದ್ದರಿದ್ದೇವೆ. ಕೇಂದ್ರ ಸಚಿವ ನಾರಾಯಣಸ್ವಾಮಿ ಅವರಿಗೂ ಈ ಕುರಿತಾಗಿ ಹೇಳುತ್ತೇನೆ. ತಪ್ಪು ಗ್ರಹಿಕೆಯ ಹೇಳಿಕೆ ಕೊಡಬಾರದು. ಏನಾದರೂ ಲೋಪವಾಗಿದ್ದರೆ ಮುಖ್ಯಮಂತ್ರಿಯನ್ನ ಭೇಟಿಯಾಗಿ ಚರ್ಚಿಸಬಹುದು ಎಂದು ನುಡಿದಿದ್ದಾರೆ.