ಹುಬ್ಬಳ್ಳಿ: ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಪಕ್ಷವನ್ನು ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿರುದ್ಧ ಇದೀಗ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಹಿರಂಗವಾಗಿ ತಿರುಗಿಬಿದ್ದಿದ್ದು, ಶೆಟ್ಟರ್ ಅವರನ್ನು ಸೋಲಿಸುವುದೇ ನನ್ನ ಗುರಿ ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ವೀರಶೈವ-ಲಿಂಗಾಯತ ಸಮುದಾಯದವರೊಂದಿಗೆ ನಡೆಸಿದ ಮಹತ್ವದ ಸಭೆಯಲ್ಲಿ ಪಾಲ್ಗೊಂಡ ಬಳಿ ಯಡಿಯೂರಪ್ಪ ಅವರು ಈ ಮಾಹಿತಿ ನೀಡಿದ್ದಾರೆ. ನಾಳೆ ರ್ಯಾಲಿ ಏರ್ಪಡಿಸಲಾಗಿದೆ, ಹತ್ತಾರು ಸಾವಿರ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿ. ರಾಜಕೀಯ ದೊಂಬರಾಟ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು, ಮನೆಯಲ್ಲಿ ಕುಳಿತ ಶೆಟ್ಟರ್ಗೆ ನಡುಕ ಉಂಟಾಗಬೇಕು ಎಂದು ಬಿಎಸ್ವೈ ಹೇಳಿದ್ದು, ಎಲ್ಲ ಬಿಟ್ಟು ಶೆಟ್ಟರ್ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಇದನ್ನು ಸವಾಲಾಗಿ ಸ್ವೀಕಾರ ಮಾಡಿ. ನನ್ನ ರಕ್ತದಲ್ಲಿ ಬರೆದುಕೊಡ್ತೇನೆ, ಯಾವ ಕಾರಣಕ್ಕೂ ಶೆಟ್ಟರ್ ಇಲ್ಲಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಇದನ್ನೂ ಓದಿ: ಭಾರತೀಯನಿಗೆ ಸಿಂಗಾಪುರದಲ್ಲಿ ಗಲ್ಲು; ಮಾದಕವಸ್ತು ಕಳ್ಳಸಾಗಣೆ ಮಾಡಿದ್ದಕ್ಕೆ ಶಿಕ್ಷೆ
ಜಗದೀಶ ಶೆಟ್ಟರ್ ನಂಬಿಕೆದ್ರೋಹಿ, ವಿಶ್ವಾಸದ್ರೋಹಿ. ಇವತ್ತಿನಿಂದ ಜಗದೀಶ್ ಶೆಟ್ಟರ್ ಹೆಸರನ್ನು ಹೇಳುವುದಿಲ್ಲ. ಪಕ್ಷಾಂತರಿಗಳನ್ನು ಕ್ಷಮಿಸುವುದಿಲ್ಲ ಎನ್ನುವ ಸುದ್ದಿ ಎಲ್ಲೆಡೆ ಹೋಗಬೇಕು. ಎಲ್ಲ ಮುಖಂಡರು ನಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ, ಜಗದೀಶ ಶೆಟ್ಟರ್ ಕಂಪನಿಗೆ ಪಾಠ ಕಲಿಸಿ ಎಂದು ಬಿಎಸ್ವೈ ಕರೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು?; ಇಲ್ಲಿದೆ ಶ್ವಾನಭವಿಷ್ಯ!
ವೀರಶೈವ-ಲಿಂಗಾಯತರ ಸಭೆ ಬಳಿಕ ಹೇಳಿಕೆ ನೀಡಿದ ಬಿಎಸ್ವೈ, ಶೆಟ್ಟರ್ಗೆ ಸೋಲುಣಿಸುವ ಉದ್ದೇಶದಿಂದ ಸಭೆ ಕರೆಯಲಾಗಿತ್ತು. ಶತಾಯಗತಾಯ ಶೆಟ್ಟರ್ಗೆ ಸೋಲು ಕಾಣಿಸುವುದೇ ಈ ಸಭೆಯ ಗುರಿ. ಪಕ್ಷ ವಿರೋಧಿಗೆ ತಕ್ಕ ಪಾಠ ಕಲಿಸುವಂತೆ ವೀರಶೈವ-ಲಿಂಗಾಯತ ಸಮುದಾಯದವರಿಗೆ ಕರೆ ನೀಡಿದ್ದೇನೆ. ಅದು ಖಂಡಿತ ಕೆಲಸ ಮಾಡುತ್ತದೆ, ಈ ಚುನಾವಣೆಯಲ್ಲಿ ಜಗದೀಶ ಶೆಟ್ಟರ್ಗೆ ಸೋಲು ಖಚಿತ. ಆ ನಿಟ್ಟಿನಲ್ಲಿ ನಾನೂ ನಾಳೆ ರೋಡ್ ಶೋ ಮಾಡ್ತೇನೆ, ಮುಂದೆ ಪ್ರಧಾನಿ ಮೋದಿ ಸಹ ಬರುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.
ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!