ಕಾರವಾರ ಬೆಳಗಾವಿ, ನಿಪ್ಪಾಣಿ, ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಅಲ್ಲಿನ ಉಪ ಮುಖ್ಯಮಂತ್ರಿ ಅಜಿತ ಪವಾರ ಇತ್ತೀಚೆಗೆ ನೀಡಿದ ಹೇಳಿಕೆ ಕನ್ನಡಿಗರ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು. ಆದರೆ, ಬಿಎಸ್ಎನ್ಎಲ್ ಆಗಲೇ ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಬಿಟ್ಟಂತಿದೆ!!
ಕಾರವಾರ ನಗರದಲ್ಲಿರುವ ಬಿಎಸ್ಎನ್ಎಲ್ ಮೊಬೈಲ್ ನೆಟ್ವರ್ಕ್ ಬಳಕೆದಾರರಿಗೆ ವೆಲ್ಕಮ್ ಟು ಮಹಾರಾಷ್ಟ್ರ ಎಂಬ ಸಂದೇಶ ಬರುತ್ತಿದೆ. ಇದರಿಂದಾಗಿ ಜನರು ಗೊಂದಲಕ್ಕೀಡಾಗಿದ್ದಾರೆ. ಯಾವಾಗ ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಿದರು ಎಂದು ತಿಳಿಯದಂತಾಗಿದ್ದಾರೆ.
ನವೆಂಬರ್ 27ರ ರಾತ್ರಿ ನಗರದ ಕೆಎಚ್ಬಿ ಭಾಗದ ಕೆಲ ಬಿಎಸ್ಎನ್ಎಲ್ ಗ್ರಾಹಕರಿಗೆ ಈ ರೀತಿ ಸಂದೇಶ ಬಂದಿದೆ. ಇದೇನು ಮೊದಲ ಬಾರಿಯಲ್ಲ. ಗೋವಾ ಗಡಿಯಲ್ಲಿರುವ ದೇವಬಾಗ, ಮಾಜಾಳಿ, ಸದಾಶಿವಗಡ ಯಾವುದೇ ಪ್ರದೇಶಕ್ಕೆ ಪರವೂರಿನ ಜನ ಹೋದರೂ ಅವರ ಮೊಬೈಲ್ಫೋನ್ಗೆ ವೆಲ್ಕಮ್ ಟು ಮಹಾರಾಷ್ಟ್ರ ಎಂಬ ಸಂದೇಶ ಬರುವುದು ಸಾಮಾನ್ಯ. ಆದರೆ, ಇದೇ ಮೊದಲ ಬಾರಿಗೆ ನಗರದಲ್ಲೂ ಈ ರೀತಿ ಸಂದೇಶ ಬಂದಿದ್ದು, ಇದರ ಸ್ಕ್ರೀನ್ ಶಾಟ್ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ.
ಗೋವಾ ರಾಜ್ಯವು ಬಿಎಸ್ಎನ್ಎಲ್ ಮಹಾರಾಷ್ಟ್ರ ವಿಭಾಗದ ವ್ಯಾಪ್ತಿಗೆ ಬರುತ್ತದೆ. ಇದರಿಂದ ಗೋವಾಕ್ಕೆ ಕಾಲಿಟ್ಟರೂ ವೆಲ್ಕಮ್ು ಮಹಾರಾಷ್ಟ್ರ ಎಂಬ ಸಂದೇಶ ಬರುತ್ತದೆ. ಆದರೆ, ಗೋವಾದದಿಂದ 12 ಕಿ.ಮೀ. ದೂರದಲ್ಲಿರುವ ಕಾರವಾರ ನಗರಕ್ಕೂ ಈ ಸಂದೇಶ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.
ಆ ರೀತಿಯ ಸಂದೇಶ ಬರಬಾರದು. ನಿರ್ದಿಷ್ಟ ಪ್ರದೇಶ ಯಾವುದು ಎಂದು ತಿಳಿಸಿದರೆ, ನಾವು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ರಾಜೇಶ್ವರಿ ಎ.ಎಸ್. ಬಿಎಸ್ಎನ್ಎಲ್ ಅಧಿಕಾರಿ, ಕಾರವಾರ