ತಿರುವನಂತಪುರಂ: ಮಕ್ಕಳ ಮುಂದೆ ಅರೆಬೆತ್ತಲೆಯಾಗಿ ನಗ್ನ ದೇಹದ ಮೇಲೆ ಡ್ರಾಯಿಂಗ್ ಮಾಡಿಸಿಕೊಂಡ ಹೋರಾಟಗಾರ್ತಿ ರೆಹನಾ ಫಾತಿಮಾಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ. ಮೊದಲು ಪೊಲೀಸ್ ದೂರು ದಾಖಲಾಯಿತು. ಅದಾದ ಬಳಿಕ ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗ ಮಧ್ಯ ಪ್ರವೇಶಿಸಿತು. ಇದೀಗ ಮತ್ತೊಂದು ಸಂಕಷ್ಟ ರೆಹನಾಗೆ ಎದುರಾಗಿದೆ.
ಬಿಎಸ್ಎನ್ಎಲ್ನ ಮಾಜಿ ಉದ್ಯೋಗಿಯಾಗಿರುವ ರೆಹನಾಗೆ ಕೊಚ್ಚಿಯಲ್ಲಿರುವ ಬಿಎಸ್ಎನ್ಎಲ್ ವಸತಿ ಕ್ವಾರ್ಟರ್ಸ್ ಅನ್ನು ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ. ಮಕ್ಕಳಿಂದ ಅರೆಬೆತ್ತಲೆ ದೇಹದ ಮೇಲೆ ಡ್ರಾಯಿಂಗ್ ಮಾಡಿಸಿಕೊಂಡ ವಿಡಿಯೋ ವೈರಲ್ ಆದ ಬೆನ್ನಲ್ಲೇ ರೆಹನಾ ವಿರುದ್ಧ ದೂರು ದಾಖಲಾಗಿತ್ತು. ಅದರ ಬೆನ್ನಲ್ಲೇ ಪೊಲೀಸರು ಕೊಚ್ಚಿಯಲ್ಲಿರುವ ರೆಹನಾ ನಿವಾಸಕ್ಕೆ ದಾಳಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮನೆ ಖಾಲಿ ಮಾಡುವಂತೆ ಬಿಎಸ್ಎನ್ಎಲ್ ಹೇಳಿದೆ.
ಇದನ್ನೂ ಓದಿ: ಉಗ್ರರ ಗುಂಡೇಟಿಗೆ ಬಲಿಯಾದ ತಾತನ ಶವದ ಮೇಲೆ ಕುಳಿತು ಬಾಲಕನ ಕಣ್ಣೀರು: ಓರ್ವ ಯೋಧ ಹುತಾತ್ಮ
ಪೊಲೀಸ್ ದಾಳಿಯ ಕ್ರಮವು ವಸತಿ ಕ್ವಾರ್ಟರ್ಸ್ ಇಮೇಜ್ ಅನ್ನು ಕಳಂಕಿತಗೊಳಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಮೇಜರ್ ತಿಳಿಸಿದ್ದಾರೆ.
ರೆಹನಾ ಜೂನ್ 19ರಂದು ತನ್ನ ಯೂಟ್ಯೂಬ್ ಚಾನಲ್ನಲ್ಲಿ ಬಾಡಿ ಆರ್ಟ್ಸ್ ಪಾಲಿಟಿಕ್ಸ್ (#BodyArtPolitics) ಎಂಬ ಅಡಿಬರಹದೊಂದಿಗೆ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ವಿಡಿಯೋದಲ್ಲಿ ರೆಹನಾ ತನ್ನ ಮಗ ಹಾಗೂ ಮಗಳ ಕೈಯಿಂದ ಅರೆಬೆತ್ತಲೆ ದೇಹದ ಮೇಲೆ ಚಿತ್ರ ಬಿಡಿಸಿಕೊಳ್ಳುತ್ತಿರುವ ದೃಶ್ಯವಿದೆ. ವಿಡಿಯೋ ಮಾಡಿದ್ದರ ಉದ್ದೇಶದ ಬಗ್ಗೆ ತಿಳಿಸಿದ್ದ ರೆಹನಾ, ಲೈಂಗಿಕತೆ ಮತ್ತು ನಗ್ನತೆ ನಿಷೇಧವಾಗಿರುವ ಸಮಾಜದಲ್ಲಿ ಮಹಿಳೆಯರು ಲೈಂಗಿಕತೆ ಮತ್ತು ಅವರ ದೇಹದ ಬಗ್ಗೆ ಮುಕ್ತವಾಗಿರಬೇಕು ಎಂದು ಪುನರುಚ್ಚರಿಸುವುದಕ್ಕಾಗಿ ಈ ವಿಡಿಯೋವನ್ನು ಮಾಡಿದ್ದಾರಂತೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 25ರಂದು ಪೊಲೀಸರು ಪನಂಪಿಲ್ಲಿಯಲ್ಲಿರುವ ಬಿಎಸ್ಎನ್ಎಲ್ ವಸತಿ ಕ್ವಾರ್ಟರ್ಸ್ ಮೇಲೆ ದಾಳಿ ಮಾಡಿದ್ದರು. ಸದ್ಯ ರೆಹನಾ ಈ ಕ್ಷಣವರೆಗೂ ನಾಪತ್ತೆಯಾಗಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ರೆಹನಾ ಅವರು ಬಿಎಸ್ಎನ್ಎಲ್ ಮಾಜಿ ಉದ್ಯೋಗಿಯಾಗಿದ್ದಾರೆ. ಅಯ್ಯಪ್ಪ ಭಕ್ತರ ನಂಬಿಕೆಗೆ ನೋವುಂಟು ಮಾಡುವ ಫೇಸ್ಬುಕ್ ಪೋಸ್ಟ್ ಹಾಕಿದ ಆರೋಪದಲ್ಲಿ ಈ ಹಿಂದೆ ಬಂಧಿತರಾಗಿ 18 ದಿನ ಜೈಲುವಾಸ ಅನುಭವಿಸಿದ್ದರು. ಇದರ ಬೆನ್ನಲ್ಲೇ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಅಲ್ಲದೆ, ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ 2018ರ ಅಕ್ಟೋಬರ್ನಲ್ಲಿ ರೆಹನಾ ಸಹ ಶಬರಿಮಲೆಗೆ ಭೇಟಿ ನೀಡುವ ಪ್ರಯತ್ನ ಮಾಡಿ, ಬಂಧಿತರಾಗಿ ಬಿಡುಗಡೆಯಾಗಿದ್ದರು.
ಕೇರಳ ಪೊಲೀಸರು ರೆಹನಾ ವಿರುದ್ಧ ಪ್ರಕರಣ ದಾಖಲಿಸಿದ ಬೆನ್ನಲ್ಲೇ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣ ಆಯೋಗ (ಎನ್ಸಿಪಿಸಿಆರ್) ಮಧ್ಯ ಪ್ರವೇಶಿಸಿ, ಆದಷ್ಟು ಬೇಗ ತನಿಖೆ ನಡೆಸಿ ವರದಿ ಸಲ್ಲಿಸಲು ಕೇರಳ ಪೊಲೀಸರಿಗೆ ಕಳೆದ ಗುರುವಾರ ಸೂಚಿಸಿದೆ.
ಇದನ್ನೂ ಓದಿ: ಜೋಶ್ ನಟಿಯ ವಿರುದ್ಧ ನಡೆದಿತ್ತು ಭಾರಿ ಸಂಚು: ಪೊಲೀಸ್ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ
ಕೇರಳ ಪೊಲೀಸರಿಗೆ ಪತ್ರ ಬರೆದಿರುವ ಎನ್ಸಿಪಿಸಿಆರ್, ಈ ವಿಚಾರವು ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಉಲ್ಲಂಘನೆಯಾಗಿದೆಯೇ ಎಂದು ಕಂಡುಹಿಡಿಯಲು ತನಿಖೆಯ ಅಗತ್ಯವಿದೆ. ಅಲ್ಲದೆ, ಮಕ್ಕಳು ತನ್ನ ತಾಯಿಯ ವರ್ತನೆಯಿಂದ ಮಾನಸಿಕ ಹಿಂಸೆಗೆ ಒಳಗಾಗಿತಬಹುದು. ಹೀಗಾಗಿ ಆಪ್ತ ಸಮಾಲೋಚನೆಯ ಅಗತ್ಯವಿದೆ ಎಂದು ಹೇಳಿದೆ. ಒಟ್ಟಾರೆ ಏನೋ ಮಾಡಲು ಹೋಗಿ ರೆಹನಾ ಇದೀಗ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. (ಏಜೆನ್ಸೀಸ್)
ಅರೆನಗ್ನ ದೇಹದ ಮೇಲೆ ತನ್ನ ಮಕ್ಕಳಿಂದಲೇ ಡ್ರಾಯಿಂಗ್ ಮಾಡಿಸಿಕೊಂಡ ರೆಹನಾ ಫಾತಿಮಾಗೆ ಸಂಕಷ್ಟ!