ಬೆಂಗಳೂರು: ‘ಡಾರ್ಲಿಂಗ್’ ಕೃಷ್ಣ ಅಭಿನಯದಲ್ಲಿ ಶಶಾಂಕ್, ‘ಕೌಸಲ್ಯಾ ಸುಪ್ರಜಾ ರಾಮ’ ಎಂಬ ಹೊಸ ಚಿತ್ರ ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಕಳೆದ ವರ್ಷವೇ ಈ ಚಿತ್ರ ಪ್ರಾರಂಭವಾಗಿತ್ತು. ಆದರೆ, ಈ ಚಿತ್ರಕ್ಕೆ ನಾಯಕಿ ಆಯ್ಕೆಯಾಗಿರಲಿಲ್ಲ. ಈಗ ‘ಪ್ರೇಮಂ ಪೂಜ್ಯಂ’ ಖ್ಯಾತಿಯ ಬೃಂದಾ ಆಚಾರ್ಯ ನಾಯಕಿಯಾಗಿ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: ಸಿನಿಸ್ಟಾರ್ಗಳ ರಾಜ‘ಕಾರಣ’: ಜನಪ್ರಿಯತೆಯೇ ಬಂಡವಾಳ!
‘ಕೌಸಲ್ಯಾ ಸುಪ್ರಜಾ ರಾಮ’ ಎಂಬ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರುತ್ತಾರೆ ಎಂದು ಶಶಾಂಕ್ ಮೊದಲೇ ಹೇಳಿದ್ದರು. ಈ ಪೈಕಿ ಒಬ್ಬ ನಾಯಕಿಯಾಗಿ ಮಿಲನಾ ನಟಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಇದೆ. ಈ ಬಗ್ಗೆ ಚಿತ್ರತಂಡದವರು ಅಧಿಕೃತ ಘೋಷಣೆ ಮಾಡದಿದ್ದರೂ, ಈ ಚಿತ್ರಕ್ಕೆ ಮಿಲನಾ ಬಹುತೇಕ ನಾಯಕಿಯಾಗುವ ಸಾಧ್ಯತೆ ಇದೆ.
ಈಗ ಈ ಚಿತ್ರದ ಇನ್ನೊಬ್ಬ ನಾಯಕಿಯಾಗಿ ಬೃಂದಾ ಸೇರ್ಪಡೆಯಾಗಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರದ ಹೆಸರು ಶಿವಾನಿಯಂತೆ. ಆದರೆ, ಅವರ ಪಾತ್ರವೇನು? ಅವರಿಲ್ಲಿ ಏನು ಮಾಡುತ್ತಾರೆ? ಎಂಬ ವಿಷಯವನ್ನು ಚಿತ್ರತಂಡ ಗೌಪ್ಯವಾಗಿಯೇ ಇಟ್ಟಿದೆ.
ಇದೊಂದು ತಾಯಿ-ಮಗ ನಡುವಿನ ಭಾವನಾತ್ಮಕ ಚಿತ್ರವಾಗಿದ್ದು, ನಾಯಕನಾಗಿ ‘ಡಾರ್ಲಿಂಗ್’ ಕೃಷ್ಣ, ತಾಯಿಯ ಪಾತ್ರದಲ್ಲಿ ಸುಧಾ ಬೆಳವಾಡಿ, ತಂದೆಯ ಪಾತ್ರದಲ್ಲಿ ರಂಗಾಯಣ ರಘು ನಟಿಸುತ್ತಿದ್ದಾರೆ. ಜತೆಗೆ ಅಚ್ಯುತ್ ಕುಮಾರ್, ಗಿರಿರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ‘ಜವಾನ್’ ಜತೆಗೆ ಸಂಜಯ್ ದತ್; ಶಾರುಖ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟನೆ
‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರವನ್ನು ಶಶಾಂಕ್ ಸಿನಿಮಾಸ್ ಹಾಗೂ ಸಚಿವ ಬಿ.ಸಿ. ಪಾಟೀಲ್ ಅವರ ಕೌರವ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಚಿತ್ರಕ್ಕೆ ಸುಜ್ಞಾನ್ ಛಾಯಾಗ್ರಹಣ, ಗಿರಿ ಮಹೇಶ್ ಸಂಕಲನ ಇರಲಿದೆ.
ಹೊಸ ಚಿತ್ರದಲ್ಲಿ ಶಿವರಾಜಕುಮಾರ್ ಜತೆಯಾದ ಗಣೇಶ್; ಸದ್ಯದಲ್ಲೇ ಪ್ರಾರಂಭ