ಬೆಂಗಳೂರು: ಕರುನಾಡಿನ ಸಾಧಕನ ಕಥೆಯೊಂದು ಇದೀಗ ಕನ್ನಡದ ಜತೆಗೆ ಬಾಲಿವುಡ್ನಲ್ಲಿ ಸಿನಿಮಾ ರೂಪದಲ್ಲಿ ನಿರ್ಮಾಣವಾಗುತ್ತಿದೆ. 40 ವರ್ಷಗಳಿಂದ ತೂಗುಸೇತುವೆಗಳ ನಿರ್ಮಾಣದ ಮೂಲಕವೇ ಹೆಸರುವಾಸಿಯಾದ ಪದ್ಮಶ್ರೀ ಪುರಸ್ಕೃತ ‘ದಿ ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ’ ಎಂದೇ ಕರೆಸಿಕೊಳ್ಳುವ ಗಿರೀಶ್ ಭಾರದ್ವಾಜ್ ಅವರ ಜೀವನಗಾಥೆ ಚಿತ್ರವಾಗುತ್ತಿದೆ!
ಸದ್ಯಕ್ಕೆ ಶೀರ್ಷಿಕೆ ಪೋಸ್ಟರ್ ಬಿಡುಗಡೆ ಮಾಡಿರುವ ತಂಡ, ಜನವರಿ 20ರಿಂದ ಸಿನಿಮಾ ಕೆಲಸಗಳಿಗೆ ಚಾಲನೆ ನೀಡಲಿದೆ. ದಕ್ಷಿಣ ಕನ್ನಡದ ಸುಳ್ಯದಲ್ಲಿ ಜನಿಸಿದ ಗಿರೀಶ್, ಇಲ್ಲಿಯವರೆಗೂ 139ಕ್ಕೂ ಅಧಿಕ ತೂಗು ಸೇತುವೆಗಳನ್ನು ನಿರ್ವಿುಸಿದ್ದಾರೆ. 240ಕ್ಕೂ ಅಧಿಕ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಿದ್ದಾರೆ. ಈ ಕಥೆಯನ್ನಿಟ್ಟುಕೊಂಡು ಸಂತೋಷ್ ಕೊಡಂಕೇರಿ, ‘ದಿ ಬ್ರಿಡ್ಜ್ ಮ್ಯಾನ್’ ಹೆಸರಿನಲ್ಲಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಮತ್ತು ಹಿಂದಿಗೆ ಹೊಂದಿಕೆ ಆಗುವ ಮುಖವನ್ನೇ ನಿರ್ದೇಶಕರು ಹುಡುಕುತ್ತಿದ್ದಾರೆ. ನಿರ್ದೇಶಕರ ಸಾಹಸಕ್ಕೆ ಶಾಂತಕುಮಾರ್ ಬಂಡವಾಳ ಹೂಡುತ್ತಿದ್ದಾರೆ. ಧನ್ವಿಕ್ ಗೌಡ ಛಾಯಾಗ್ರಹಣ, ವಿನಯ್ ಶರ್ಮಾ ಸಂಗೀತ ಸಂಯೋಜಿಸಲಿದ್ದಾರೆ.