ಕೋಯಿಕ್ಕೋಡ್: ಮದುವೆ ಮಂಟಪಕ್ಕೆ ಆಗಮಿಸುತ್ತಿದ್ದ ವರ ಮತ್ತು ಆತನ ಫ್ರೆಂಡ್ಸ್ ಮೇಲೆ ವಧುವಿನ ಸಂಬಂಧಿಕರು ದಾಳಿ ಮಾಡಿರುವ ಘಟನೆ ಕೇರಳದ ಕೋಯಿಕ್ಕೋಡ್ನಲ್ಲಿ ನಡೆದಿದೆ.
ಗುರುವಾರ ಸಂಜೆ ಈ ಘಟನೆ ನಡೆದಿದೆ. ನದೇರಿ ಮಂಜಲಾಡ್ ನಿವಾಸಿ ಕುಂಜಿಮುಹಮ್ಮದ್ ಪುತ್ರ ಮುಹಮ್ಮದ್ ಸಲಿಹ್ (29) ಫ್ರೆಂಡ್ಸ್ ಜತೆ ಕಾರಿನಲ್ಲಿ ಮದುವೆ ಮಂಟಕ್ಕೆ ಆಗಮಿಸುವಾಗ ಕೀಝರಿಯೂರಿನ ಕನ್ನೂತ್ನಲ್ಲಿ ವಧುವಿನ ಸಂಬಂಧಿಕರು ದಾಳಿ ನಡೆಸಿದ್ದಾರೆ.
ಘಟನೆಯ ವಿವರಣೆಗೆ ಬರುವುದಾದರೆ, ಮುಹಮ್ಮದ್ ಸಲಿಹ್ ಕೀಝರಿಯೂರಿನ ನಿವಾಸಿಯಾಗಿರುವ ತನ್ನ ಗರ್ಲ್ಫ್ರೆಂಡ್ ಜತೆ ಎರಡು ತಿಂಗಳ ಹಿಂದೆಯೇ ರಿಜಿಸ್ಟರ್ ಮದುವೆಯಾಗಿದ್ದರು. ಬಳಿಕ ವರನ ಕುಟುಂಬ ಸಾಂಪ್ರದಾಯಿಕವಾಗಿ ಮದುವೆ ನಡೆಸಲು ನಿರ್ಧರಿಸಿದ್ದರು. ಅದರಂತೆ ಮದುವೆ ಮಂಟಪಕ್ಕೆ ವರ ಬರುವಾಗ ಮಾರ್ಗಮಧ್ಯೆ ಕಾರನ್ನು ಅಡ್ಡಗಟ್ಟಿದ ವಧುವಿನ ಸಂಬಂಧಿಕರು ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಅಪಾಯಕಾರಿ ಪಟ್ಟಿಯಿಂದ ಗಾಂಜಾ ಹೊರಕ್ಕೆ- ವಿಶ್ವಸಂಸ್ಥೆ ನಿರ್ಣಯಕ್ಕೆ ಒಪ್ಪಿದ ಭಾರತ: ಇಲ್ಲಿದೆ ಕಾರಣ…
ಮಚ್ಚಿನಿಂದ ಕಾರಿನ ಕಿಟಕಿ ಗಾಜುಗಳನ್ನು ನಾಶ ಮಾಡಲಾಗಿದ್ದು, ಸಲಿಹ್ನನ್ನು ವಶಕ್ಕೆ ಪಡೆಯಲು ಯತ್ನಿಸಿದ್ದಾರೆ. ಆದರೆ, ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದು, ಘಟನೆಯಲ್ಲಿ ಸಲಿಹ್ ಫ್ರೆಂಡ್ಸ್ ಮುಹಮ್ಮದ್ ಶಫಿ ಮತ್ತು ಶಬೀರ್ಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಕೊಯಿಲ್ಯಾಂಡಿ ತಾಲೂಕು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಪ್ರೇಮ ವಿವಾಹ ಆಗಿರುವುದರಿಂದ ಯುವತಿ ತನ್ನ ಪಾಲಕರನ್ನು ವಿರೋಧಿಸಿ, ಮನೆ ತೊರೆದು ಸಲಿಹ್ ಮನೆಗೆ ಹೋದಾಗಲೇ ಸಲಿಹ್ ಮನೆ ಮೇಲೆ ದಾಳಿ ಮಾಡಿ ಯುವತಿಯನ್ನು ಅಪಹರಿಸಲಾಗಿತ್ತು. ಆದರೆ, ಯುವತಿ ತಪ್ಪಿಸಿಕೊಂಡು ಬಂದು ಸಲಿಹ್ ಜತೆ ವಾಸವಿದ್ದಳು. ಹೀಗಾಗಿ ಸಲಿಹ್ ಕುಟುಂಬ ಸಾಂಪ್ರದಾಯಿಕವಾಗಿ ನಿಖಾ ನಡೆಸಲು ನಿರ್ಧರಿಸಿದ್ದರು.
ಆದರೆ, ಇದು ಯುವತಿಯ ಅಂಕಲ್ಗೆ ಇಷ್ಟವಿರಲಿಲ್ಲ. ಹೇಗಾದರೂ ಮಾಡಿ ಮದುವೆ ತಪ್ಪಿಸಬೇಕೆಂದು ಸಲೀಹ್ ಮನೆ ಮೇಲೆ ದಾಳಿ ಮಾಡಿದ್ದರು. ಈ ಸಂಬಂಧ ಕೊಯಿಲಾಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಇಬ್ಬರು ಆರೋಪಿಗಳನ್ನು ಗುರುತಿಸಲಾಗಿದ್ದು, ಅವರು ನಾಪತ್ತೆಯಾಗಿದ್ದಾರೆಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)
ಇತಿಹಾಸ ಸೃಷ್ಟಿಸಿದ ಸೆನ್ಸೆಕ್ಸ್,ನಿಫ್ಟಿ – ಒಂದೇ ವಾರದಲ್ಲಿ 60ಕ್ಕೂ ಅಧಿಕ ಷೇರುಗಳ ಮೌಲ್ಯ ಶೇಕಡ 10-50 ಏರಿಕೆ