ನವದೆಹಲಿ: ಕರೊನಾ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕ್ರೀಡಾ ಸಹೋದರರ ಕುಟುಂಬಕ್ಕೆ ಕ್ರೀಡಾ ಸಚಿವಾಲಯ ಸಹಾಯಕ್ಕೆ ಮುಂದಾಗಿದ್ದು, ತಲಾ 5 ಲಕ್ಷ ರೂ. ಮಂಜೂರು ಮಾಡಿದೆ.
ಉತ್ತರ ಪ್ರದೇಶದಲ್ಲಿ ನೆಲೆಸಿರುವ ಬಾಕ್ಸರ್ ಸುನಿಲ್ ಚೌಹಾಣ್ ಹಾಗೂ ಆತನ ಸಹೋದರ ಆರ್ಚರ್ ನೀರಜ್ ಚೌಹಾಣ್ ಅವರ ತಂದೆ ಕರೊನಾ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಕುಟುಂಬಕ್ಕೆ ಜೀವಾನಾಧಾರ ಆಗಿರುವ ಅವರು ಇದರಿಂದಾಗಿ ಜೀವನನಿರ್ವಹಣೆಗೆ ತರಕಾರಿ ಮಾರಾಟ ಮಾಡಬೇಕಾಗಿದೆ.
ಈ ವಿಷಯ ತಿಳಿದ ಕ್ರೀಡಾ ಸಚಿವ ಕಿರಣ್ ರಿಜಿಜು ಇಬ್ಬರೂ ಸಹೋದರರಿಗೂ ತಲಾ 5 ಲಕ್ಷ ರೂ. ಮಂಜೂರು ಮಾಡಿದ್ದಾರೆ. ಪಂಡಿತ್ ದೀನದಯಾಳ್ ಉಪಾಧ್ಯಾಯ ನ್ಯಾಷನಲ್ ವೆಲ್ಫೇರ್ ಫಂಡ್ ಫಾರ್ ಸ್ಪೋರ್ಟ್ಸ್ ಪರ್ಸನ್ಸ್ನಡಿ ಈ ಆರ್ಥಿಕ ನೆರವು ನೀಡಲಾಗುತ್ತಿದೆ.
ನೀರಜ್ 50 ಮೀ. ಸೀನಿಯರ್ ಆರ್ಚರಿ ಚಾಂಪಿಯನ್ಷಿಪ್-2018 ಬೆಳ್ಳಿ ಪದಕ, 65ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ 2020ರಲ್ಲಿ ಪದಕ ಗಳಿಸಿದ್ದು, ಸುನಿಲ್ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ 2020ರಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಆರ್ಥಿಕ ನೆರವು ಮಂಜೂರು ಹಿನ್ನೆಲೆಯಲ್ಲಿ ಸಚಿವರಿಗೆ ಇಬ್ಬರೂ ಧನ್ಯವಾದ ಸಲ್ಲಿಸಿದ್ದಾರೆ.