ನವದೆಹಲಿ: ಚಿಕ್ಕ ಬಟ್ಟೆಯಂಗಡಿಯ ಮಾಲಕಿಯೊಬ್ಬರು ತಮ್ಮ ಐಷಾರಾಮಿ ಕಾರನ್ನು ನಾಲ್ವರ ಮೇಲೆ ಹರಿಸಿ, ಗಂಭೀರವಾಗಿ ಗಾಯಗೊಳಿಸಿದ್ದಾರೆ. ಕಾರಣ ಕೇಳಿದರೆ ಅದು ನಾನು ಮಾಡಿದ್ದಲ್ಲ, ನನ್ನ ನಾಯಿಯಿಂದಾದ ಆಕಸ್ಮಿಕ ಎಂದು ಹೇಳಿದ್ದಾರೆ.
ಹರಿಯಾಣದ ಫರೀದಾಬಾದ್ ನಿವಾಸಿ ರೋಷನಿ ಅರೋರಾ (29) ಅಪಘಾತ ಮಾಡಿದ ಮಹಿಳೆ. ದೆಹಲಿಯ ಕೈಲಾಶ್ ಬಡಾವಣೆಯ ಪೂರ್ವಭಾಗದಲ್ಲಿರುವ ಸಪ್ನಾ ಚಿತ್ರಮಂದಿರದ ಬಳಿ ರೋಷನಿ ಅರೋರಾ ತಮ್ಮ ಐಷಾರಾಮಿ ಬಿಎಂಡಬ್ಲ್ಯು ಕಾರು ನಿಲ್ಲಿಸಿಕೊಂಡು ನಿಂತಿದ್ದರು. ಎದುರಿಗೆ ಐಸ್ಕ್ರೀಂ ಮಾರುವ ಗಾಡಿಯೊಂದು ನಿಂತಿದ್ದು, ಅದರ ಸುತ್ತ ನಾಲ್ಕಾರು ಜನರು ಐಸ್ಕ್ರೀಂ ಖರೀದಿಸುತ್ತಿದ್ದರು.
ಈ ಸಂದರ್ಭದಲ್ಲಿ ರೋಷನಿ ಅವರು ತಮ್ಮ ಬಿಎಂಡಬ್ಲ್ಯು ಕಾರನ್ನು ಏಕಾಏಕಿ ಚಲಾಯಿಸಿದ್ದಾರೆ. ಎದುರಿಗಿದ್ದ ಐಸ್ಕ್ರೀಂ ಗಾಡಿಗೆ ಜೋರಾಗಿ ಗುದ್ದಿದ್ದಾರೆ. ಇದರಿಂದಾಗಿ ಗಾಡಿಯು ಅನತಿ ದೂರದವರೆಗೆ ಸಾಗಿ ಪಲ್ಟಿ ಹೊಡೆದಿದೆ. ಐಸ್ಕ್ರೀಂ ಗಾಡಿಯ ಮಾಲೀಕ ಸೇರಿ ಅದರ ಸುತ್ತ ನಿಂತಿದ್ದ ನಾಲ್ಕು ಮಂದಿಗೆ ಗಂಭೀರ ಗಾಯವಾಗಿದೆ. ಸ್ವಲ್ಪದೂರ ಹೋದ ಬಳಿಕ ರೋಷನಿ ಕಾರನ್ನು ನಿಲ್ಲಿಸಿದ್ದಾರೆ. ಮುಕೇಶ್ ಕುಮಾರ್, ಸಪ್ನಾಕುಮಾರಿ, ಗುಡ್ಡು ಮತ್ತು ಹರ್ಷಿತ್ ಕೌರ್ ಗಾಯಗೊಂಡವರು. ಇವರಲ್ಲಿ ಹರ್ಷಿತ್ ಕೌರ್ ಅವರ ಹಿಮ್ಮಡಿಗೆ ಗಂಭೀರ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಸಿವಿಲ್ ಇಂಜಿನಿಯರ್ ನೇಮಕ ಪ್ರಕ್ರಿಯೆ ಗುಮಾನಿ
ಏಕೆ ಹೀಗೆ ಮಾಡಿದಿರಿ ಎಂದು ಪ್ರಶ್ನಿಸಿದಾಗ ರೋಷನಿ, ಐಸ್ಕ್ರೀಂ ತಿನ್ನಲೆಂದು ಕಾರನ್ನು ನಿಲ್ಲಿಸಿದ್ದೆ. ಕಾರಿನಲ್ಲಿ ನನ್ನೊಂದಿಗೆ ನನ್ನ ಸಾಕು ನಾಯಿ ಕೂಡ ಇತ್ತು. ಕಾರು ನಿಲ್ಲಿಸುತ್ತಲೇ ಅದು ಏಕಾಏಕಿ ನನ್ನ ಮೇಲೆ ಎಗರಿತು. ಗಾಬರಿಯಲ್ಲಿ ನಾನು ಬ್ರೇಕ್ ಪೆಡಲ್ ಬದಲು ಕಾರಿನ ಆ್ಯಕ್ಸಿಲೇಟರ್ ಒತ್ತಿದೆ. ಹೀಗಾಗಿ ಅಪಘಾತವಾಯಿತು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಈ ವಿಷಯವನ್ನು ತಿಳಿಸಿರುವ ಆಗ್ನೇಯ ದೆಹಲಿಯ ಡಿಸಿಪಿ ಆರ್.ಪಿ. ಮೀನಾ, ತಕ್ಷಣವೇ ರೋಷನಿ ಅರೋರಾ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಅವರು ಮದ್ಯಪಾನ ಮಾಡಿರಲಿಲ್ಲ ಎಂಬುದು ಖಚಿತವಾಗಿದೆ. ಹಾಗಾಗಿ ಅವರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.