ನ್ಯಾಮತಿ(ದಾವಣಗೆರೆ ಜಿಲ್ಲೆ): ತಾಲೂಕಿನ ಒಡೆಯರ ಹತ್ತೂರು ಗ್ರಾಮದಲ್ಲಿ ಮಂಗಳವಾರ ಶ್ರೀ ಬಸವೇಶ್ವರ ಹಾಗೂ ಆಂಜನೇಯ ಸ್ವಾಮಿ ಕಾರ್ತಿಕ ದೀಪೋತ್ಸವ ಸಂಭ್ರಮದಿಂದ ನೆರವೇರಿತು.
ಸೋಮವಾರ ಬೆಳಗ್ಗೆಯಿಂದ ಬಸವೇಶ್ವರ, ಆಂಜನೇಯ ಹಾಗೂ ಚನ್ನಪ್ಪ ಸ್ವಾಮೀಜಿ ಗದ್ದುಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಅರ್ಚನೆ, ಸ್ತೋತ್ರ ಪಠಣ, ಮಹಾ ಮಂಗಳಾರತಿ ನೆರವೇರಿಸಲಾಯಿತು.
ಮಂಗಳವಾರ ಬೆಳಗ್ಗೆ ದೇಗುಲದ ಆವರಣದಲ್ಲಿ ಪ್ರಾಕಾರೋತ್ಸವ, ಭಜನೆ ಸೇರಿ ವಿವಿಧ ಕಾರ್ಯಕ್ರಮ ನಡೆದವು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಆಂಜನೇಯ ಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು.
ಸುತ್ತಮುತ್ತಲ ಹಳ್ಳಿಯ ನೂರಾರು ಭಕ್ತರು ಮೆರವಣಿಗೆ ವೀಕ್ಷಿಸಲು ಆಗಮಿಸಿದ್ದರು. ಭೂತಗಣ ಮಕ್ಕಳು ಮಣೇವು ಆಡುವುದರ ಮೂಲಕ ಕಾರ್ತಿಕೋತ್ಸವಕ್ಕೆ ತೆರೆ ಎಳೆಯಲಾಯಿತು. ಬಳಿಕ ಶ್ರೀ ಬಸವೇಶ್ವರ ಸ್ವಾಮಿ ಉತ್ಸವಮೂರ್ತಿಯನ್ನು ಬಿಜ್ಜೋಗಟ್ಟೆ ಶ್ರೀ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಬೀಳ್ಕೊಡಲಾಯಿತು.