ಮುಂಬೈ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ)ದ ಅಧಿಕಾರಿ ಸಮೀರ್ ವಾಂಖೆಡೆ ಅವರ ತಂದೆ ಧ್ಯಾನ್ದೇವ್ ವಾಂಖೆಡೆ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಮಂಗಳವಾರದೊಳಗೆ ಅಫಿಡೆವಿಟ್ ಮೂಲಕ ಪ್ರತಿಕ್ರಿಯೆ ಸಲ್ಲಿಸಬೇಕೆಂದು ಮಹಾರಾಷ್ಟ್ರ ಸಚಿವ ಹಾಗೂ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ನಾಯಕ ನವಾಬ್ ಮಲಿಕ್ ಅವರಿಗೆ ಬಾಂಬೆ ಹೈಕೋರ್ಟ್ ಸೂಚಿಸಿದೆ.
ಕ್ರೂಸ್ ಶಿಪ್ ಡ್ರಗ್ಸ್ ಪಾರ್ಟಿ ಕೇಸಿನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ರ ಪುತ್ರ ಆರ್ಯನ್ ಖಾನ್ ಅವರನ್ನು ಅ.3 ರಂದು ಬಂಧಿಸಿದಾಗಿನಿಂದ ಆ ಪ್ರಕರಣದ ಮೇಲ್ವಿಚಾರಣೆ ವಹಿಸಿದ್ದ ಎನ್ಸಿಬಿ ಮುಂಬೈ ವಲಯ ನಿರ್ದೇಶಕರಾಗಿರುವ ಸಮೀರ್ ವಾಂಖೆಡೆ ವಿರುದ್ಧ ಮಲಿಕ್ ಹಲವು ರೀತಿಯ ವೈಯಕ್ತಿಕ ಆರೋಪಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಧ್ಯಾನ್ದೇವ್ ವಾಂಖೆಡೆ ತಮ್ಮ ಕುಟುಂಬದ ವರ್ಚಸ್ಸು ಹಾಳುಮಾಡಿದ್ದಕ್ಕಾಗಿ ಮಲಿಕ್ರಿಂದ 1.25 ಕೋಟಿ ರೂಪಾಯಿ ಪರಿಹಾರ ಕೋರಿ ಮೊಕದ್ದಮೆ ಹೂಡಿದ್ದಾರೆ.
ಇದನ್ನೂ ಓದಿ: ಕ್ರೂಸ್ ಪಾರ್ಟಿಗೆ ಆರ್ಯನ್ನ ಕರ್ಕೊಂಡು ಹೋಗಿದ್ರು! ಮಹಾ ಸಚಿವನಿಂದ ಮತ್ತಷ್ಟು ಸ್ಫೋಟಕ ಹೇಳಿಕೆ
ಇಂದು ಈ ಮೊಕದ್ದಮೆಯು ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರನ್ನೊಳಗೊಂಡ ರಜಾಕಾಲೀನ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತು. ಧ್ಯಾನ್ದೇವ್ ವಾಂಖೆಡೆ ವಕೀಲ ಅರ್ಷದ್ ಶೈಖ್ ಅವರು, ಮಲಿಕ್ ಪ್ರತಿದಿನ ಸುಳ್ಳು ಮತ್ತು ಅವಹೇಳನಕಾರಿ ಮಾತುಗಳನ್ನು ಆಡುತ್ತಾರೆ. ಅವು ಸಾಮಾಜಿಕ ಮಾಧ್ಯಮದಲ್ಲಿ ಮತ್ತಷ್ಟು ಅವಹೇಳನಕಾರಿ ಕಾಮೆಂಟುಗಳಿಗೆ ಆಸ್ಪದ ನೀಡುತ್ತಿವೆ. ಇಂದು ಕೂಡ ಸಮೀರ್ ಸಂಬಂಧಿಯ ಬಗ್ಗೆ ಟ್ವೀಟ್ ಮಾಡಿದ್ದು, ಈ ಮೊಕದ್ದಮೆ ನಡೆಯುತ್ತಿರುವಾಗಲಾದರೂ ಮಲಿಕ್ ಮತ್ಯಾವುದೇ ಹೇಳಿಕೆ ನೀಡದಂತೆ ಆದೇಶಿಸಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ನವಾಬ್ ಮಲಿಕ್ರ ವಕೀಲ ಅತುಲ್ ದಾಮ್ಲೆ, ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ಕೋರಿದರು. ಹಾಗೂ ಪ್ರಾಪ್ತ ವಯಸ್ಕರಾದ ತಮ್ಮ ಮಕ್ಕಳ ಪರವಾಗಿ ಅರ್ಜಿದಾರ ಧ್ಯಾನ್ದೇವ್ ಮಾತನಾಡಲು ಸಾಧ್ಯವಿಲ್ಲ ಎಂದರು. “ನೀವು(ನವಾಬ್ ಮಲಿಕ್) ನಿಮ್ಮ ಪ್ರತಿಕ್ರಿಯೆಯನ್ನು ನಾಳೆ ಫೈಲ್ ಮಾಡಿ. ನೀವು ಟ್ವಿಟರ್ನಲ್ಲಿ ರಿಪ್ಲೈ ಮಾಡಬಲ್ಲಿರಾದರೆ, ಇಲ್ಲಿಯೂ ಮಾಡಬಲ್ಲಿರಿ” ಎಂದು ನ್ಯಾಯಮೂರ್ತಿಗಳು ಹೇಳಿದರು. ಯಾವುದೇ ಮಧ್ಯಂತರ ಆದೇಶ ಮಾಡದೆ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು ಎನ್ನಲಾಗಿದೆ. (ಏಜೆನ್ಸೀಸ್)