ಲಖನೌ: ದೇಶಾದ್ಯಂತ ಇದೀಗ ಮತ್ತೆ ಕರೊನಾ ಭಯ ತೀವ್ರಗೊಂಡಿದ್ದು, ಮತ್ತೆ ಮಾಸ್ಕ್-ಸೋಷಿಯಲ್ ಡಿಸ್ಟೆನ್ಸ್ ಮುಂತಾದ ಮುನ್ನೆಚ್ಚರಿಕೆ ಕ್ರಮಗಳು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆಗಳು ಹೊರಬಿದ್ದಿವೆ. ಅದರಲ್ಲೂ ಇಲ್ಲೊಂದು ಪ್ರದೇಶದ ಜನರಿಗೆ ಕೋವಿಡ್ ಭಯ ಅತಿಯಾಗಿದೆ.
ಮನೆಯ ಸಮೀಪದ ತೆರೆದ ಜಾಗದಲ್ಲೇ ಶವಸಂಸ್ಕಾರಗಳು ನಡೆಯುತ್ತಿರುವುದರಿಂದ ನಿವಾಸಿಗರು ಅತಿಯಾದ ಕೋವಿಡ್ ಭಯದಲ್ಲೇ ಬದುಕುವಂತಾಗಿದೆ. ಉತ್ತರಪ್ರದೇಶದ ಲಖನೌದಲ್ಲಿ ಇಂಥದ್ದೊಂದು ಪರಿಸ್ಥಿತಿ ಉಂಟಾಗಿದೆ.
ಲಖನೌದ ಎಲ್ಡಿಎ ಕಾಲನಿಯಲ್ಲಿನ ನಿವಾಸಿಗರು ಈ ಭಯವನ್ನು ಎದುರಿಸುತ್ತಿದ್ದಾರೆ. ಇಲ್ಲಿನ ಗುಡಂಬ ಪೊಲೀಸ್ ಠಾಣೆ ವ್ಯಾಪ್ತಿಯ ಜಾನಕಿಪುರಂ ಜೆ ಸೆಕ್ಟರ್ನಲ್ಲಿ ಇರುವ ಎಲ್ಡಿಎ ಕಾಲನಿಯಲ್ಲಿ ಆರಂಭದಲ್ಲಿ ಪಾರ್ಕ್ಗೆ ಎಂದು ಜಾಗ ಬಿಡಲಾಗಿತ್ತು. ಬಳಿಕ ಅದನ್ನು ಸ್ಮಶಾನ ಎಂದು ಪರಿಗಣಿಸಲಾಗಿದೆ. ಹೀಗಾಗಿ ಸುತ್ತಮುತ್ತ ಮನೆ ಇರುವ ಆ ತೆರೆದ ಜಾಗದಲ್ಲಿ ಶವಸಂಸ್ಕಾರ ನಡೆಯುತ್ತಿದ್ದು, ನಿವಾಸಿಗರು ಈಗ ಅಲ್ಲಿ ಹೆಚ್ಚಿನ ಕೋವಿಡ್ ಆತಂಕದಲ್ಲೇ ದಿನಗಳೆಯುವಂತಾಗಿದೆ.
ಶವಗಳ ದಹನದ ಹಿನ್ನೆಲೆಯಲ್ಲಿ ಉಂಟಾಗುವ ಹೊಗೆ ಇತ್ಯಾದಿ ಹಿನ್ನೆಲೆಯಲ್ಲಿ ಮಕ್ಕಳನ್ನು ಹೊರಗೆ ಬಿಡದೆ ಮನೆಯಲ್ಲೇ ಇರಿಸಿಕೊಳ್ಳುವಂತಾಗಿದೆ. ಲಖನೌ ಅಭಿವೃದ್ಧಿ ಪ್ರಾಧಿಕಾರ ಸ್ಮಶಾನದ ಜಾಗವನ್ನು ಮೈದಾನ ಎಂದು ತೋರಿಸಿ ಮೋಸ ಮಾಡಿದೆ ಎಂದು ಆರೋಪಿಸಿರುವ ನಿವಾಸಿಗರು, ಸ್ಮಶಾನವನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ. –ಏಜೆನ್ಸೀಸ್
ಕರೊನಾ ರೋಗಿಗಳನ್ನು ನೋಡುತ್ತಲೇ ಸುಸ್ತಾಗಿ ಕುಸಿದುಬಿದ್ದ ಡಾಕ್ಟರ್: ವಿಡಿಯೋ ವೈರಲ್