ಬೆಂಗಳೂರು: ಅಂದಾಜು ಕಳೆದ ಎರಡು ತಿಂಗಳಿಂದ ಸಾರ್ವಜನಿಕರು ಅನುಭವಿಸುತ್ತಿದ್ದ ಕರೊನಾ ಲಾಕ್ಡೌನ್ನ ಸಂಕಷ್ಟ ಕೊನೆಗಾಣುವ ದಿನ ಅಂತೂ ಸಮೀಪಿಸಿದೆ.
ಸೋಮವಾರದಿಂದ ರಾಜ್ಯ ವ್ಯಾಪಿ ಲಾಕ್ಡೌನ್ ಅನ್ನು ಹಿಂತೆಗೆದುಕೊಳ್ಳುವ ಮುನ್ಸೂಚನೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಕ್ರವಾರದ ತಮ್ಮ ಸುದ್ದಿಗೋಷ್ಠಿಯಲ್ಲಿ ನೀಡಿದ್ದಾರೆ.
ಇದಕ್ಕೆ ಪೂರಕ ಎಂಬಂತೆ ಶುಕ್ರವಾರ ಅಪರಾಹ್ನದ ವೇಳೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಧಿಕೃತ ಆದೇಶ ಬಿಡುಗಡೆ ಮಾಡಿದ್ದು, ತನ್ನ ಎಲ್ಲ ಸಿಬ್ಬಂದಿಯೂ ಸೋಮವಾರದಿಂದ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚಿಸಿದೆ.
ಇದನ್ನೂ ಓದಿ ಕೆಂಪು ವಲಯದಲ್ಲಿ ಆರ್ಥಿಕ ಚಟುವಟಿಕೆಗೆ ಅವಕಾಶ ಕೊಡಿ
‘‘ಮೇ 17ರಂದು ಲಾಕ್ಡೌನ್ ಅವಧಿಯು ಪೂರ್ಣಗೊಳ್ಳಲಿದ್ದು 18ರಿಂದ ಅಧಿಕಾರಿಗಳೂ ಒಳಗೊಂಡಂತೆ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಬೇಕು’’ ಎಂದು ಬಿಎಂಟಿಸಿ ನಿರ್ದೇಶಕರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಇದರಿಂದಾಗಿ ಬೆಂಗಳೂರಿನಲ್ಲಿ ಮೊದಲಿನಂತೆ ಬಿಎಂಟಿಸಿ ಬಸ್ಗಳು ಸಂಚರಿಸುವುದು ನಿಶ್ಚಿತವಾದಂತಾಗಿದೆ.
ಇದಲ್ಲದೆ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಜ್ವರ ಇದೆಯೇ ಎಂಬುದನ್ನು ಪ್ರತಿದಿನವೂ ಕಾರ್ಯನಿರ್ವಹಣೆಯ ಆರಂಭಕ್ಕೆ ಮುನ್ನವೇ ಖಚಿತಪಡಿಸಿಕೊಳ್ಳಲು ಬಿಎಂಟಿಸಿ ಮುಂದಾಗಿದೆ. ಇದಕ್ಕಾಗಿ ಎಲ್ಲ ಡಿಪೋಗಳಲ್ಲಿ ಥರ್ಮಲ್ ಸ್ಕ್ಯಾನರ್ಗಳನ್ನು ಸಿದ್ಧವಾಗಿ ಇಟ್ಟುಕೊಳ್ಳುವಂತೆ ಸೂಚಿಸಿದೆ.