ವಿಜಯಪುರ: ಕಳೆದ ಎರಡು ಚುನಾವಣೆಗಳಲ್ಲಿ ಸುಳ್ಳಿನ ಸರಮಾಲೆಯನ್ನೇ ಹೆಣೆದು ಆರಿಸಿ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತವರ ಬಿಜೆಪಿ ಪಕ್ಷದ ಸುಳ್ಳಿನ ಆಟ ಇನ್ಮುಂದೆ ನಡೆಯಲ್ಲ. ಜನ ಜಾಣರಾಗಿದ್ದು ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶಾಸಕ ಲಕ್ಷ$್ಮಣ ಸವದಿ ಹೇಳಿದರು.
ಕೊಲ್ಹಾರ ಪಟ್ಟಣದಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ಸುಳ್ಳಿನ ಮೇಲೆ ಸಾಮ್ರಾಜ್ಯ ಕಟ್ಟುತ್ತಿದ್ದಾರೆ.
ಭ್ರಮೆ ಸೃಷ್ಟಿಸುತ್ತಿದ್ದಾರೆ. ಮುಗ್ಧ ಜನರ ಭಾವನೆಗಳ ಜೊತೆ ಚಲ್ಲಾಟವಾಡುತ್ತಿದ್ದಾರೆ. ಈ ಬಾರಿ ಜನ ಎಚ್ಚೆತ್ತುಕೊಂಡಿದ್ದಾರೆ. ಈಗಾಗಲೇ ವಿಧಾನ ಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದು, ಲೋಕಸಭೆ ಚುನಾವಣೆಯಲ್ಲೂ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದರು.
ಕಾಂಗ್ರೆಸ್ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಪ. ಈ ದೇಶವನ್ನು ಕಟ್ಟಿದ ಪಕ್ಷ. ರಾಜ್ಯದ ಸಿದ್ದರಾಮಯ್ಯರ ಸರ್ಕಾರ ಗ್ಯಾರಂಟಿಗಳ ಮೂಲಕ ಜನಮನ ಗೆದ್ದಿದೆ.
ಬಡವರ ನಿತ್ಯ ಜೀವನಕ್ಕೆ ಸಹಾಯವಾಗಲಿ ಎಂದು ಭಾಗ್ಯಗಳನ್ನು ಕೊಟ್ಟಿದೆ. ಕೆಂದ್ರ ಸರ್ಕಾರದ ಕೆಟ್ಟ ಆಡಳಿತದಿಂದ ಬೆಲೆ ಏರಿಕೆ, ಹಣದುಬ್ಬರ, ಜಿಎಸ್ಟಿ, ನೋಟ್ ಬಂದಿಯಿಂದ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿತ್ತು. ಇದರಿಂದ ಸಾಮಾನ್ಯ ಜನ ತತ್ತರಿಸಿದ್ದರು. ಅವರಿಗೆಲ್ಲ ಗ್ಯಾರಂಟಿಗಳಿಂದ ಉಸಿರಾಡುವಂತಾಗಿದೆ ಎಂದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ ಮಾತನಾಡಿ, ಆರು ಸಲ ಸಂಸದರಾಗಿದ್ದ ಜಿಗಜಿಣಗಿಯವರಿಂದ ಯಾವುದೇ ಅಭಿವೃದ್ಧಿ ಕೆಲಸವೂ ಆಗಿಲ್ಲ. ಹೀಗಾಗಿ ಈ ಬಾರಿ ರಾಜು ಆಲಗೂರ ಅವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಅಭ್ಯರ್ಥಿ ರಾಜು ಆಲಗೂರ ಮಾತನಾಡಿ, ಬಿಜೆಪಿ ಹುರಿಯಾಳಾದ ಜಿಗಜಿಣಗಿಯವರು ಹತಾಶರಾಗಿದ್ದಾರೆ. ಸಹನೆ ಕಳೆದುಕೊಂಡು ಏನೇನೊ ಮಾತನಾಡುತ್ತಿದ್ದಾರೆ.
ಇದು ಅವರ ಸೋಲಿನ ದಿಕ್ಸೂಚಿಯಾಗಿದೆ. ಮತದಾರರಾದ ನೀವು ನನ್ನನ್ನು ಆಯ್ಕೆ ಮಾಡಿದರೆ ನಿಮ್ಮ ವಿಶ್ವಾಸ ಉಳಿಸಿಕೊಳ್ಳುವೆ ಎಂದು ಹೇಳಿದರು.
ಮಾಜಿ ಜಿಪಂ ಸದಸ್ಯ ಕಲ್ಲು ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮತಯಾಚಿಸಿದರು.
ಮುಖಂಡರಾದ ಶಿವನಗೌಡ ಗುಜಗೊಂಡ, ಸಿ.ಎಸ್. ಗಿಡ್ಡಪ್ಪಗೋಳ, ಬಿ.ಯು. ಗಿಡ್ಡಪ್ಪಗೋಳ, ಎಸ್.ಬಿ. ಪತಂಗಿ, ಆರ್.ಬಿ. ಪಕಾಲಿ, ಉಸ್ಮಾನ ಪಟೇಲ್, ವಿಜಯ ಮಹಾಂತೇಶ ಗಿಡ್ಡಪ್ಪಗೋಳ, ಎಂ.ಆರ್. ಕಲಾದಗಿ, ಶ್ರೀಶೈಲ ಗೌಡರ, ಡಾ. ಮೇತ್ರಿ, ಪುಟ್ಟು ಪಾಟೀಲ್ ಮತ್ತಿತರರಿದ್ದರು.