ಚಿಕ್ಕಮಗಳೂರು: ಆರ್.ಆರ್.ನಗರ, ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಹಾಗೂ ಕಡೂರಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಸಿಡಿಎ ಸದಸ್ಯ ಸಮೃದ್ಧ ಪೈ ಮಾತನಾಡಿ, ಆರ್.ಆರ್.ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಕಾರ್ಯಕರ್ತರ ಪರಿಶ್ರಮದಿಂದ ಈ ಗೆಲುವು ಸಾಧ್ಯವಾಗಿದೆ. ಬಿಹಾರದಲ್ಲೂ ಜನ ಬಿಜೆಪಿಯನ್ನು ಬೆಂಬಲಿಸಿದ್ದು ಅಧಿಕಾರ ಹಿಡಿಯುವ ಎಲ್ಲ ಲಕ್ಷಣಗಳಿವೆ ಎಂದರು.
ಮುಖಂಡ ಸೀತಾರಾಂ ಭರಣ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತಂಡ ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ಮತದಾರ ತೀರ್ಪು ನೀಡಿದ್ದಾನೆ. ಕರ್ನಾಟಕ ಹಾಗೂ ಗುಜರಾತ್ನಲ್ಲಿ ಕ್ಲೀನ್ಸ್ವೀಪ್ ಮಾಡಿ ಮಧ್ಯಪ್ರದೇಶ ಉತ್ತರ ಪ್ರದೇಶದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಜನತೆ ಬಿಜೆಪಿ ಮೇಲಿಟ್ಟಿರುವ ನಿರೀಕ್ಷೆ ಹುಸಿಯಾಗದಂತೆ ಕೆಲಸ ಮಾಡಲು ಬದ್ಧರಿದ್ದೇವೆ ಎಂದು ತಿಳಿಸಿದರು.