More

    ವಿಸಿಟರ್​ ಪಾಸ್ ಅವಾಂತರ​: ಸ್ಪೀಕರ್ ಎದುರು ಕೊನೆಗೂ ಮೌನ ಮುರಿದ ಸಂಸದ ಪ್ರತಾಪ್​ ಸಿಂಹ!

    ನವದೆಹಲಿ: ಇಂದು ಲೋಕಸಭಾ ಕಲಾಪದ ವೇಳೆ ಪ್ರೇಕ್ಷಕರ ಗ್ಯಾಲರಿಯಿಂದ ಸ್ಪೀಕರ್​ ಕುರ್ಚಿಯತ್ತ ನುಗ್ಗಿದ ಇಬ್ಬರು ಕಿಡಿಗೇಡಿಗಳಲ್ಲಿ ಓರ್ವ ಸಂಸದ ಪ್ರತಾಪ್​ ಸಿಂಹ ಹೆಸರಲ್ಲಿ ವಿಸಿಟರ್​ ಪಾಸ್​ ಪಡೆದಿದ್ದು, ಈ ವಿಚಾರವಾಗಿ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಅವರನ್ನು ಭೇಟಿ ಮಾಡಿರುವ ಪ್ರತಾಪ್​ ಸಿಂಹ ವಿವರಣೆ ನೀಡಿದ್ದಾರೆ.

    ಘಟನೆಯ ಬೆನ್ನಲ್ಲೇ ಇಂದು ಸಂಜೆ ಸ್ಪೀಕರ್​ ಕಚೇರಿಗೆ ತೆರಳಿದ ಪ್ರತಾಪ್​ ಸಿಂಹ, ಆರೋಪಿ ಸಾಗರ್​ ಶರ್ಮಾ ಅವರ ತಂದೆ ಶಂಕರ್​ ಲಾಲ್​ ಶರ್ಮಾ ನಮ್ಮ ಕ್ಷೇತ್ರ ಮೈಸೂರಿನಲ್ಲಿ ನೆಲೆಸಿದ್ದಾರೆ. ಹೊಸ ಸಂಸತ್​ ಭವನವನ್ನು ನೋಡಬೇಕೆಂದು ಅನೇಕ ಬಾರಿ ವಿಸಿಟರ್​ ಪಾಸ್​ಗಾಗಿ ಮನವಿ ಮಾಡಿದ್ದರು ಎಂದು ಹೇಳಿದ್ದಾರೆ.

    ಸಾಗರ್ ಶರ್ಮಾ, ಸಂಸತ್ತಿಗೆ ಭೇಟಿ ನೀಡಲು ತಮ್ಮ ಆಪ್ತ ಸಹಾಯಕ ಮತ್ತು ತಮ್ಮ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಇದನ್ನು ಹೊರತುಪಡಿಸಿ ಹೆಚ್ಚುವರಿ ಮಾಹಿತಿ ಇಲ್ಲ ಎಂದು ಸ್ಪೀಕರ್​ ಮುಂದೆ ಹೇಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಇಂದು ಸದನದ ಒಳಗೆ ಕಲರ್​ ಗ್ಯಾಸ್​ ಕ್ಯಾನಿಸ್ಟರ್​ನಿಂದ ಗದ್ದಲ ಎಬ್ಬಿಸಿದ ಇಬ್ಬರು ಕಿಡಿಗೇಡಿಗಳನ್ನು ಸಾಗರ್​ ಶರ್ಮ ಮತ್ತು ಮನೋರಂಜನ್​ ಡಿ ಎಂದು ಗುರುತಿಸಲಾಗಿದೆ. ಇದರಲ್ಲಿ ಸಾಗರ್​ ಶರ್ಮಾ ಬಳಿ ಪ್ರತಾಪ್​ ಸಿಂಹ ವಿಸಿಟರ್​ ಪಾಸ್​ ಪತ್ತೆಯಾಗಿದ್ದು, ಈ ವಿಚಾರವನ್ನು ಉಚ್ಛಾಟಿತ ಬಿಎಸ್​ಪಿ ಸಂಸದ ಡ್ಯಾನಿಶ್​ ಅಲಿ ಮಾಧ್ಯಮಗಳ ಮೂಲಕ ಬೆಳಕಿಗೆ ತಂದರು. ಬಳಿಕ ಪ್ರತಿಪಕ್ಷಗಳು ಪ್ರತಾಪ್​ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ, ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್​ ಸಿಂಹ ಅವರ ಕಚೇರಿಗೆ ಕಾಂಗ್ರೆಸ್​ ಕಾರ್ಯಕರ್ತರು ಮುತ್ತಿಗೆ ಸಹ ಹಾಕಿದ್ದಾರೆ. ಮುತ್ತಿಗೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಈ ಕೃತ್ಯಕ್ಕೆ ಸಂಸದರೇ ನೇರ ಹೊಣೆ ಎಂದು ಕಾಂಗ್ರೆಸ್​ ಕಾರ್ಯಕರ್ತರು ಆರೋಪಿಸಿದ್ದಾರೆ. ಸಂಸದರ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸದನದ ಒಳಗೆ ಗದ್ದಲ ಏರ್ಪಟ್ಟ ಸಂದರ್ಭದಲ್ಲೇ ಸಂಸತ್ತಿನ ಹೊರಭಾಗದಲ್ಲಿ ಓರ್ವ ಮಹಿಳೆ ಮತ್ತು ಯುವಕ ಕಲರ್ ಗ್ಯಾಸ್​ ಸಿಂಪಡಿಸಿ, ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಇವರನ್ನು ಅನ್ಮೋಲ್​ ಶಿಂಧೆ ಮತ್ತು ನೀಲಂ ಎಂದು ಗುರುತಿಸಲಾಗಿದೆ. ನಾಲ್ವರು ಸಹ ಒಬ್ಬರಿಗೊಬ್ಬರು ಪರಿಚಿತರು ಎಂಬುದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಸಂಪರ್ಕದಲ್ಲಿದ್ದ ನಾಲ್ವರು ಸಂಚು ರೂಪಿಸಿದ್ದರು. ಈ ಸಂಚಿನಲ್ಲಿ ಒಟ್ಟು 6 ಮಂದಿ ಭಾಗಿಯಾಗಿದ್ದಾರೆ. ಇಬ್ಬರು ಸದನದ ಒಳಗೆ, ಮತ್ತಿಬ್ಬರು ಸಂಸತ್ತಿನ ಹೊರಗೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದರೆ, ಇನ್ನಿಬ್ಬರು ಶಂಕಿತರು ಪರಾರಿಯಾಗಿದ್ದಾರೆ. ಅವರಿಗಾಗಿ ತನಿಖಾ ಏಜೆನ್ಸಿಗಳು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿವೆ.

    ಐವರು ವ್ಯಕ್ತಿಗಳು ಗುರುಗ್ರಾಮ್‌ನಲ್ಲಿ ಲಲಿತ್ ಝಾ ಎಂದು ಗುರುತಿಸಲಾದ ವ್ಯಕ್ತಿಯ ನಿವಾಸದಲ್ಲಿ ಒಟ್ಟಿಗೆ ತಂಗಿದ್ದರು ಎಂದು ಮೂಲಗಳು ತಿಳಿಸಿವೆ. ಸದ್ಯ ಐವರ ಗುರುತು ದೃಢಪಟ್ಟಿದ್ದು, ಆರನೇ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಶಂಕರ್​ ಲಾಲ್​ ಶರ್ಮರ ಪುತ್ರ ಸಾಗರ್​ ಶರ್ಮ ಎಂಬಾತ ಮೈಸೂರು ಲೋಕಸಭಾ ಸಂಸದ ಪ್ರತಾಪ್​ ಸಿಂಹ ಹೆಸರಿನಲ್ಲಿ ಪಾಸ್​ ಪಡೆದು ಪ್ರೇಕ್ಷಕರ ಗ್ಯಾಲರಿಗೆ ಆಗಮಿಸಿದ್ದ. ಮತ್ತೊಬ್ಬ ಆರೋಪಿ ಮನೋರಂಜನ್​ ಡಿ ಮೈಸೂರಿನ ನಿವಾಸಿ. ಬೆಂಗಳೂರಿನ ವಿವೇಕಾನಂದ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್​ ಸೈನ್ಸ್​ನಲ್ಲಿ ಬಿಇ ವ್ಯಾಸಾಂಗ ಮಾಡಿದ್ದಾನೆ. ಇವರಿಬ್ಬರು ಪ್ರೇಕ್ಷಕರ ಗ್ಯಾಲರಿಯ ಚೇಂಬರ್​ನಿಂದ ಜಿಗಿದು ಸ್ಪೀಕರ್​ ಕುರ್ಚಿಯತ್ತ ನುಗ್ಗಿದರು. ತಕ್ಷಣ ಅವರನ್ನು ಅಲ್ಲಿಯೇ ಇದ್ದ ಕೆಲವು ಸಂಸದರು ಹಿಡಿದುಕೊಂಡರು.

    ಸಂಸತ್ತಿನ ಹೊರಗಡೆ ಕಲರ್​ ಗ್ಯಾಸ್​ ಸಿಂಪಡಿಸಿ ಸರ್ಕಾರಿ ವಿರೋಧಿ ಘೋಷಣೆ ಕೂಗುತ್ತಿದ್ದ ನೀಲಂ ಎಂಬಾಕೆ, ಹರಿಯಾಣದ ಹಿಸರ್​ನಲ್ಲಿ ಪಿಜಿಯಲ್ಲಿ ವಾಸವಿದ್ದಳು. ಹರಿಯಾಣದ ನಾಗರಿಕ ಸೇವಾ ಪರೀಕ್ಷೆಗೆ ತಯಾರಾಗುತ್ತಿದ್ದಳು. ಇನ್ನೊಬ್ಬ ಆರೋಪಿ ಅನ್ಮೋಲ್​ ಶಿಂಧೆ ಮಹಾರಾಷ್ಟ್ರ ಲಾತೂರ್ ಜಿಲ್ಲೆಯವನು. ನೀಲಂ ಅಥವಾ ಅನ್ಮೋಲ್ ಮೊಬೈಲ್ ಫೋನ್ ತಂದಿರಲಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅವರ ಬಳಿ ಯಾವುದೇ ಬ್ಯಾಗ್ ಅಥವಾ ಗುರುತಿನ ಪುರಾವೆಯೂ ಇರಲಿಲ್ಲ. ಅವರು ತಾವಾಗಿಯೇ ಸಂಸತ್ತನ್ನು ತಲುಪಿದರು ಮತ್ತು ಯಾವುದೇ ಸಂಘಟನೆಯೊಂದಿಗೆ ತಮ್ಮ ಸಂಪರ್ಕವನ್ನು ನಿರಾಕರಿಸಿದ್ದಾರೆ. ಪೊಲೀಸರು ವಿಚಾರಣೆಗಾಗಿ ವಿಶೇಷ ತಂಡವನ್ನು ರಚಿಸಿದ್ದು, ತನಿಖೆ ಮುಂದುವರಿದಿದೆ.

    ಲೋಕಸಭೆ ಸ್ಪೀಕರ್​ ಹೇಳಿದ್ದೇನು?
    ಘಟನೆಯ ಬಗ್ಗೆ ಮಾತನಾಡಿರುವ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಶೂನ್ಯ ಸಮಯದಲ್ಲಿ ನಡೆದ ಘಟನೆಯ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ದೆಹಲಿ ಪೊಲೀಸರಿಗೆ ಅಗತ್ಯ ಸೂಚನೆಗಳನ್ನು ಸಹ ನೀಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಇದು ಕೇವಲ ಹೊಗೆ ಎಂದು ಕಂಡುಬಂದಿದೆ. ಹೊಗೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದರು ಹೇಳಿದರು. ಸದ್ಯ ಇಬ್ಬರನ್ನೂ ಬಂಧಿಸಲಾಗಿದ್ದು, ಅವರಲ್ಲಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಸತ್ತಿನ ಹೊರಗಿದ್ದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದರು. (ಏಜೆನ್ಸೀಸ್​)

    ಷೇರು ಸೂಚ್ಯಂಕ ಅಲ್ಪ ಏರಿಕೆ: ಫೆಡರಲ್​ ಬ್ಯಾಂಕ್​ ನಿರ್ಧಾರ ಅವಲಂಬಿಸಿ 70 ಸಾವಿರ ಗಡಿ ದಾಟುವ ನಿರೀಕ್ಷೆ

    ಲೀಲಮ್ಮರನ್ನು ನೋಡಿಕೊಳ್ಳುತ್ತಿದ್ದ ಬಂಗಾರಮ್ಮ ನಿಧನ

    ಮೊಹಮ್ಮದ್​ ಶಮಿಗೆ ಅರ್ಜುನ ಪ್ರಶಸ್ತಿ ನೀಡಲು ಬಿಸಿಸಿಐ ಶಿಫಾರಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts