ಬೆಂಗಳೂರು: ಈ ಟೆಕ್ನಾಲಜಿ ಯುಗದಲ್ಲಿ ಕುಳಿತಲ್ಲೇ ವಂಚನೆ ಎಸಗುತ್ತಿರುವ ಜಾಲ ದಿನದಿಂದ ದಿನಕ್ಕೆ ದೊಡ್ಡದಾಗಿ ಬೆಳೆಯುತ್ತಿದೆ. ಮೊಬೈಲ್ ನಂಬರ್, ಎಟಿಎಂ ನಂಬರ್ ಹಾಗೂ ಆಧಾರ್ ಕಾರ್ಡ್ ನಂಬರ್ ಸೇರಿದಂತೆ ಹಲವು ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ವಂಚನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂತಹ ಕಾಣದ ಕೈಗಳ ಬಗ್ಗೆ ಜನರಿಗೆ ಅರಿವು ತುಂಬಾ ಮುಖ್ಯ. ಈ ಸೈಬರ್ ಖದೀಮರ ಟಾರ್ಗೆಟ್ ಕೇವಲ ಸಾಮಾನ್ಯ ಜನರು ಮಾತ್ರವಲ್ಲ, ಉನ್ನತ ಸ್ಥಾನದಲ್ಲಿರುವವರು ಸೇರಿದ್ದಾರೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆ ಆಗಿದೆ.
ಹೌದು, ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಅವರ ಮೊಬೈಲಲ್ ನಂಬರ್ ದುರ್ಬಳಕೆ ಮಾಡಿಕೊಂಡು ವಂಚನೆ ಎಸಗಲು ಯತ್ನಿಸಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಈ ಸಂಬಂಧ ದಕ್ಷಿಣ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜನಪ್ರತಿನಿಧಿಗಳು ಅಂದ ಮೇಲೆ ಅವರಿಗೆ ತುಂಬಾ ಕೆಲಸದ ಒತ್ತಡ ಇರುತ್ತದೆ ಮತ್ತು ಪ್ರತಿನಿತ್ಯವೂ ಸಾಕಷ್ಟು ಕರೆಗಳು ಬರುತ್ತಲೇ ಇರುತ್ತವೆ. ಬಂದ ಕರೆಗಳನೆಲ್ಲ ಅವರೇ ಸ್ವೀಕರಿಸಿ ಮಾತನಾಡಲು ಆಗುವುದಿಲ್ಲ. ಹೀಗಾಗಿ ಅವರ ಆಪ್ತ ಸಹಾಯಕರು ಕರೆಗಳನ್ನು ನಿರ್ವಹಿಸುತ್ತಾರೆ. ಅದೇ ರೀತಿ ಸಂಸದ ತೇಜಸ್ವಿ ಸೂರ್ಯ ಅವರ ಅಧಿಕೃತ ಸಂವಹನಕ್ಕೆ ಬಳಸುವ ಮೊಬೈಲ್ ನಂಬರ್ ಅನ್ನು ಅವರ ಆಪ್ತ ಕಾರ್ಯದರ್ಶಿ ಭಾನುಪ್ರಕಾಶ್ ಬಳಸುತ್ತಿದ್ದಾರೆ.
ಗುಜರಾತಿನ ಬಿಜೆಪಿ ಮುಖಂಡನಿಗೆ ಕರೆ
ನಿತ್ಯವು ಬರುವ ಕರೆಗಳನ್ನು ಸ್ವೀಕರಿಸಿ ಅದರ ಬಗ್ಗೆ ಸಂಸದರಿಗೆ ನಿಯಮಿತವಾಗಿ ಆಪ್ತ ಕಾರ್ಯದರ್ಶಿ ಮಾಹಿತಿ ನೀಡುತ್ತಾರೆ. ಜುಲೈ 1ರಂದು ಸಂಸದ ತೇಜಸ್ವಿ ಸೂರ್ಯ ಅವರ ಮೊಬೈಲ್ ನಂಬರ್ನಿಂದ ಗುಜರಾತಿನ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಕೊರಟ್ ಎಂಬುವರ ಮೊಬೈಲ್ಗೆ ಕರೆ ಮಾಡಿ ಹಣ ಮತ್ತು ವಜ್ರಕ್ಕೆ ಕೊಡುವಂತೆ ಕೇಳಿದ್ದಾರೆ.
ಸಂಸದರೊಬ್ಬರು ಕರೆ ಮಾಡಿ ಹಣ, ವಜ್ರ ಕೇಳಿದಾಗ ಸಹಜವಾಗಿಯೇ ಯಾರಿಗಾದರೂ ಅನುಮಾನ ಬಂದೇ ಬರುತ್ತದೆ. ಅದರಂತೆ ಪ್ರಶಾಂತ್ ಅವರಿಗೂ ಅನುಮಾನ ಬಂದು ಸಂಸದರ ಆಪ್ತ ಕಾರ್ಯದರ್ಶಿ ಭಾನುಪ್ರಕಾಶ್ಗೆ ಕರೆ ಮಾಡಿ ವಿಚಾರಿಸಿದಾಗ ಆ ರೀತಿಯ ಯಾವುದೇ ಕರೆಯನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಇದನ್ನು ಗಂಭೀರವಾಗಿ ಪರಿಗಣಿಸಿದ ಭಾನುಪ್ರಕಾಶ್, ದಕ್ಷಿಣ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಿಯಕರನ ಮಾತು ನಂಬಿ ಮನೆಗೆ ಹೋದ ಗರ್ಭಿಣಿ ದುರಂತ ಸಾವು: ತನಿಖೆಯಲ್ಲಿ ಬಯಲಾಯ್ತು ಭೀಕರತೆ