ವಿಜಯಪುರ: ನಗರದ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 02ರಂದು ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಸುಲೇಮಾನ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಇಂಥ ಘಟನೆಗಳಲ್ಲಿ ಸುಲೇಮಾನ್ ಎಂಬ ಹೆಸರಿನ ವ್ಯಕ್ತಿ ಸಿಗಬೇಕೇ ಹೊರತು ಶಿವಪ್ಪ ಅಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಈ ಕುರಿತು ಮಾತನಾಡಿದ ಶಾಸಕ ಯತ್ನಾಳ್, ಘಟನೆಗೆ ಸಂಬಂಧಿಸಿದಂತೆ ಅಪ್ರಬುದ್ಧ ಹೇಳಿಕೆಗಳನ್ನು ಕೊಟ್ಟ ಕಾಂಗ್ರೆಸ್ ಸರ್ಕಾರದ ಸಚಿವರಿಗೆ ಮುಖ ಇಲ್ಲದಂತಾಗಿದೆ. ಇಂತಹ ಘಟನೆಗಳಲ್ಲಿ ಸುಲೇಮಾನ್ ಎಂಬ ಹೆಸರಿನ ವ್ಯಕ್ತಿ ಸಿಗಬೇಕೇ ವಿನಃ ಶಿವಪ್ಪ ಎಂಬುವರು ಸಿಗಲ್ಲ. ಸುಲೇಮಾನ್, ಅಜಗರ್, ಅಹ್ಮದ್ ಇವರೇ ಸಿಗಬೇಕಲ್ಲಾ ಎಂದಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ; ಐದು ಗ್ಯಾರಂಟಿಗಳನ್ನು ಘೋಷಿಸಿದ ರಾಹುಲ್ ಗಾಂಧಿ
ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ವ್ಯವಸ್ಥಿತ ಜಾಲ ಎಂದು ಸ್ಪಷ್ಟವಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ. ಬಾಂಬ್ ಸ್ಪೋಟಕ್ಕೂ ಪಾಕಿಸ್ತಾನ್, ಐಎಸ್ಐಎಸ್ಗೂ ಲಿಂಕ್ ಇದೆ. ಇದು ದೇಶವನ್ನ ಅಭದ್ರಗೊಳಿಸುವ ಸಂಚು. ಪಿಎಫ್ಐ ಚಟುವಟಿಕೆಗಳಿಗೂ ಲಿಂಕ್ ಇದೆ. ಸ್ಪೋಟದ ಹಿಂದೆ ಭಾರತವನ್ನ ಇಸ್ಲಾಮಿಕರಣ ಮಾಡುವ ಸಂಚಿದೆ. ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಟಿಕರಣದಿಂದ ಬಾಂಬರ್ಗಳಿಗೆ ಸ್ವಾತಂತ್ರ್ಯ ಸಿಕ್ಕಂತಾಗಿದೆ ಎಂದು ಆರೋಪಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಗೃಹ ಮಂತ್ರಿಗಳೇ ಛೀಮಾರಿ ಹಾಕಿದ್ದಾರೆ. ಏನು ಗೊತ್ತಿಲ್ಲದೆ ಮಾಧ್ಯಮಗಳ ಮುಂದೆ ಖರ್ಗೆ ಹೇಳಿಕೆ ಕೊಡುತ್ತಾರೆ. ಸಚಿವ ಪ್ರಿಯಾಂಕ್ ಖರ್ಗೆ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ಬಿಟ್ಟು ಅವರ ಇಲಾಖೆಯಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡಲಿ. ಅಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಬರೀ ಹಿಂದೂಗಳನ್ನ ಬೈಯುವ ಕೆಲಸ ಮಾಡುತ್ತಿದ್ದಾರೆಂದು ಶಾಸಕ ಬಸನ್ಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.