ಕಲಬುರಗಿ: ‘ತೆನೆ ಹೊತ್ತ ಕಮಲ’ ಎಂಬ ಬೆಳವಣಿಗೆ ಈಗ ಇದು ಯಾರಿಗೆ ಭಾರ, ಯಾರಾಗುವರು ದೂರ? ಎಂಬಂಥ ಅಯೋಮಯ ಸ್ಥಿತಿಯನ್ನು ಸೃಷ್ಟಿಸಿದೆ. ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಒಂದೆಡೆ ಅಲ್ಪಸಂಖ್ಯಾತರ ಮನವೊಲಿಸಲು ಸಭೆ ನಡೆಸಿದ್ದರೆ, ಮತ್ತೊಂದೆಡೆ ಜೆಡಿಎಸ್ನಲ್ಲಿ ಇರಬೇಕೋ ಬೇಡವೋ ಎಂದು ಅಲ್ಪಸಂಖ್ಯಾತ ನಾಯಕರು ಸಭೆ ನಡೆಸಿ ಮಹತ್ವದ ನಿರ್ಣಯವೊಂದನ್ನು ಕೈಗೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಅಲ್ಪಸಂಖ್ಯಾತರ ಸಭೆ ನಡೆಸಿದ್ದಾರೆ. ಆದರೆ ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಅಸಮಾಧಾನಗೊಂಡಿರುವ ಅಲ್ಪಸಂಖ್ಯಾತ ನಾಯಕರು ಕಲಬುರಗಿಯಲ್ಲಿ ಇಂದು ಸಭೆ ಸೇರಿದ್ದಾರೆ. ಜಾತ್ಯಾತೀತ ಮೌಲ್ಯಗಳಿಗಾಗಿ ಎನ್ನುವ ಹೆಸರಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ನಾಯಕರು ಕಲಬುರಗಿಯಲ್ಲಿ ಸಮಾವೇಶಗೊಂಡಿದ್ದು, ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಲ್ಪಸಂಖ್ಯಾತ ಜೆಡಿಎಸ್ ನಾಯಕರು ಭಾಗಿಯಾಗಿದ್ದಾರೆ.
ಜೆಡಿಎಸ್ ಮುಖಂಡ ನಾಸೀರ್ ಹುಸೇನ್, ಮಾಜಿ ಸಚಿವ ಎಂ.ಎಂ. ನಬಿ ನೇತೃತ್ವದಲ್ಲಿ ನಡೆದ ಈ ಸಮಾವೇಶದಲ್ಲಿ ನೂರಾರು ಅಲ್ಪಸಂಖ್ಯಾತ ಜೆಡಿಎಸ್ ಭಾಗಿಯಾಗಿ ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈತ್ರಿ ಬಳಿಕವೂ ಜೆಡಿಎಸ್ನಲ್ಲೇ ಇರಬೇಕಾ, ಬೇಡವಾ ಎಂದೂ ಚರ್ಚೆ ನಡೆಸಿದ್ದಾರೆ. ಬಳಿಕ ಒಂದು ಮಹತ್ವ ತೀರ್ಮಾನ ತಳೆದಿದ್ದಾರೆ.
ಬಹಳ ಮಾತುಕತೆ ಬಳಿಕ ಈ ಮುಖಂಡರು ಜೆಡಿಎಸ್ಗೆ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಅ.5ರಂದು ಬೆಂಗಳೂರಿಗೆ ತೆರಳಿ ಸಾಮೂಹಿಕವಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಮಾಜಿ ರಾಜ್ಯಾಧ್ಯಕ್ಷ ನಾಸೀರ್ ಹುಸೇನ್ ಉಸ್ತಾದ್ ನೇತೃತ್ವದಲ್ಲಿ ರಾಜೀನಾಮೆ ಘೋಷಣೆ ಮಾಡಲಾಗಿದೆ.
ಬಿಜೆಪಿ, ಆರ್ಎಸ್ಎಸ್ ತತ್ವ-ಸಿದ್ಧಾಂತಗಳ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಖಂಡಿತ ನಮಗೆ ಇಷ್ಟವಿಲ್ಲ. ಕುಮಾರಸ್ವಾಮಿ ಪಕ್ಷ ಉಳಿಸಿಕೊಳ್ಳಲು ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ ಮುಸ್ಲಿಮರನ್ನು ಅತ್ಯಂತ ಕಟುವಾಗಿ ನಡೆಸಿಕೊಳ್ಳುವ ಬಿಜೆಪಿ ಜೊತೆ ಮೈತ್ರಿ ಒಪ್ಪಿಗೆ ಇರದ್ದರಿಮದ ಸಾಮೂಹಿಕ ರಾಜೀನಾಮೆ ನೀಡುವುದು ಎಂಬುದಾಗಿ ಇವರೆಲ್ಲ ನಿರ್ಣಯಕ್ಕೆ ಬಂದಿದ್ದಾರೆ.
ಉದ್ಯಮಿಯ ಸೊಸೆ ನೇಣಿಗೆ ಶರಣು; ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿತ್ತು..