ಬೆಂಗಳೂರು: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಹಾಗೂ ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ಹೈಕಮಾಂಡ್ ಶುಕ್ರವಾರ (ನ.10) ನೇಮಕ ಮಾಡಿದೆ.
ಈ ಮುಂಚೆ ಉಪಾಧ್ಯಕ್ಷರಾಗಿದ್ದ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಬಡ್ತಿ ನೀಡುವ ಮೂಲಕ ದೀಪಾವಳಿಗೂ ಮುನ್ನ ಬಂಪರ್ ಉಡುಗೊರೆ ನೀಡಿದ್ದು, ರಾಜಕೀಯ ವಲಯದಲ್ಲಿ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಅವರು ಎಲ್ಲರಿಗಿಂತ ಮೊದಲು ಶುಭಕೋರಿರುವುದು ತುಂಬಾ ವಿಶೇಷ.
ಬಿಎಲ್ ಸಂತೋಷ್ ಹೇಳಿದ್ದೇನು?
ಎಕ್ಸ್ (ಈ ಹಿಂದೆ ಟ್ವಿಟರ್) ಖಾತೆಯಲ್ಲಿ ಬಿಜೆಪಿ ಹೈಕಮಾಂಡ್ ನೇಮಕಾತಿ ಪತ್ರವನ್ನು ಪೋಸ್ಟ್ ಮಾಡಿರುವ ಬಿ.ಎಲ್. ಸಂತೋಷ್, ಅಭಿನಂದನೆಗಳು… ಪಕ್ಷವನ್ನು ವಿಜಯದ ಹಾದಿಯಲ್ಲಿ ನಡೆಸುವಲ್ಲಿ ಯಶಸ್ಸು ನಿಮ್ಮದಾಗಲಿ ಎನ್ನುವ ಮೂಲಕ ಎಲ್ಲಿಯೂ ಹೆಸರನ್ನು ಉಲ್ಲೇಖಿಸದೇ, ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡದೆಯೇ ಶುಭ ಕೋರಿರುವುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಅಂದಹಾಗೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನಿಂದ ಪಾಠ ಕಲಿತಿರುವ ಬಿಜೆಪಿ ಹೈಕಮಾಂಡ್, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇದೇ ತಪ್ಪು ಮರುಕಳಿಸಬಾರದು ಅಂತ ಅಳೆದು ತೂಗಿ, ತುಂಬಾ ಲೆಕ್ಕಾಚಾರ ಮಾಡಿ ಲಿಂಗಾಯತ ಸಮುದಾಯದ ಯುವ ನಾಯಕ ಬಿ.ವೈ. ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವನ್ನು ನೀಡಿದಂತಿದೆ. ಯಡಿಯೂರಪ್ಪರನ್ನು ಕಡಗಣಿಸಿದ್ದೇ ಬಿಜೆಪಿಯ ಹೀನಾಯ ಸೋಲಿಗೆ ಕಾರಣ ಎಂಬ ಚರ್ಚೆಗಳು ವ್ಯಾಪಕವಾಗಿ ಕೇಳಿಬಂದಿತ್ತು. ಅಲ್ಲದೆ, ಬಹುತೇಕ ಲಿಂಗಾಯತ ಮತಗಳು ಕಾಂಗ್ರೆಸ್ ಪಾಲಾಗಿದ್ದವು. ಇದರಿಂದ ಎಚ್ಚೆತ್ತಿರುವ ಬಿಜೆಪಿ ಹೈಕಮಾಂಡ್ ಬಿವೈ ವಿಜಯೇಂದ್ರರಿಗೆ ಮಣೆ ಹಾಕಿದೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಇದಕ್ಕೂ ಮುನ್ನ ರಾಜ್ಯಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಸಿಟಿ ರವಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬಂದಿತ್ತು. ಆದರೆ, ಅವರೆಲ್ಲರನ್ನು ಹಿಂದಿಕ್ಕಿ ಯುವ ನಾಯಕ ಬಿವೈ ವಿಜಯೇಂದ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಬಿಜೆಪಿ ಹೈಕಮಾಂಡ್ ಮತ್ತೆ ಮಾಜಿ ಸಿಎಂ ಯಡಿಯೂರಪ್ಪ ಶಕ್ತಿ ಏನೆಂಬುದನ್ನು ಅರಿತಂದಿದೆ.
ವಿಜಯದ ನಿರೀಕ್ಷೆಯಲ್ಲಿ ವಿಜಯೇಂದ್ರಗೆ ಪಟ್ಟ; ರಾಜ್ಯದಲ್ಲಿ ತಗ್ಗಿಲ್ಲ ರಾಜಾಹುಲಿ ಪ್ರಭಾವ!
ಪೆಟ್ರೋಲ್-ಡೀಸೆಲ್ ಜಿಎಸ್ಟಿ ವ್ಯಾಪ್ತಿಗೆ ತರಲು ಒಲವು ತೋರಿ ‘ಕೈ’ ಟಾರ್ಗೆಟ್ ಮಾಡಿದ ನಿರ್ಮಲಾ ಸೀತಾರಾಮನ್?