ಬೆಂಗಳೂರು: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸುವ ಮೂಲಕ ಹೊಸ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪ್ರಯೋಗಕ್ಕೆ ಮುಂದಾದ ಬಿಜೆಪಿ ಸರಿಯಾಗಿ ಕೈ ಸುಟ್ಟಿಕೊಂಡಿದ್ದು ಈ ಪೈಕಿ 12 ಸಚಿವರು, 56 ಹೊಸಮುಖ, 62 ಹಾಲಿ ಶಾಸಕರಿಗೆ ಮತದಾರ ಸೋಲಿನ ರುಚಿ ತೋರಿಸಿದ್ದಾನೆ.
ಉಲ್ಟಾ ಹೊಡೆದ ಲೆಕ್ಕಾಚಾರ
ಟಿಕೆಟ್ ಹಂಚಿಕೆ ವಿಷಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದ ಬಿಜೆಪಿ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿದ್ದು ಈ ಕುರಿತು ರಾಜ್ಯ ನಾಯಕರು ಪರಮಾರ್ಶೆಯಲ್ಲಿ ತೊಡಗಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಶಾಸಕ ಹಾಗೂ ಸಚಿವರೆಂದು ಗುರುತಿಸಿಕೊಂಡಿದ್ದವರಿಗೂ ಸಹ ಜನ ಸೋಲಿನ ರುಚಿ ತೋರಿಸಿದ್ದು ಈ ಪೈಕಿ ಗೆದ್ದ ಹಾಗೂ ಸೋತವರ ಮಾಹಿತಿ ಹೀಗಿದೆ.
ಇದನ್ನೂ ಓದಿ: ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ್ ಬೊಮ್ಮಾಯಿ ರಾಜೀನಾಮೆ
12 ಸಚಿವರಿಗೆ ಶಾಕ್
ಮಾಜಿ ಸಿಎಂ ಬಿಎಸ್ವೈ ಹಾಗೂ ನಿರ್ಗಮಿತ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರೆಂದು ಗುರುತಿಸಿಕೊಂಡಿದವರಿಗೆ ಜನತೆ ಸೋಲಿಸುವ ಮೂಲಕ ಶಾಕ್ ನೀಡಿದ್ದಾರೆ.
ಗೋವಿಂದ ಕಾರಜೋಳ, ಜೆ.ಸಿ. ಮಾಧುಸ್ವಾಮಿ, ಬಿ.ಸಿ. ಪಾಟೀಲ್, ಶಂಕರ್ ಪಾಟೀಲ್ ಮುನೇನಕೊಪ್ಪ, ಹಾಲಪ್ಪ ಆಚಾರ್, ಶ್ರೀರಾಮುಲು, ಡಾ.ಕೆ. ಸುಧಾಕರ್, ವಿ.ಸೋಮಣ್ಣ(ಸ್ಪರ್ಧಿಸಿದ ಎರಡು ಕಡೆ ಸೋಲು), ಕೆ.ಸಿ. ನಾರಾಯಣಗೌಡ, ಬಿ.ಸಿ. ನಾಗೇಶ್, ಎಂ.ಟಿ.ಬಿ ನಾಗರಾಜ್ ಸೋತ ಪ್ರಮುಖ ಸಚಿವರು.
75ರ ಪೈಕಿ ಗೆದ್ದ 18 ಮಂದಿ
ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯೂ ಈ ಭಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 75 ಹೊಸ ಮುಖಗಳಿಗೆ ಮಣೆ ಹಾಕಿದ್ದು ಈ ಪೈಕಿ 19 ಮಂದಿ ಗೆದ್ದು ಬೀಗಿದ್ದು 57 ಮಂದಿಗೆ ಜನಮನ್ನಣೆ ದೊರೆತ್ತಿಲ್ಲ.
ಈ ಪೈಕಿ ಬಿ.ವೈ. ವಿಜಯೇಂದ್ರ, ಮಂಜುಳಾ ಲಿಂಬಾವಳಿ, ಮಹೇಶ್ ಟೆಂಗಿನಕಾಯಿ, ನಿಖಿಲ್ ಕತ್ತಿ, ವಿಠಲ್ ಹಲಗೇಕರ್, ಗುರುರಾಜ್ ಗಂಟಿಹೊಳೆ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಯಶ್ಪಾಲ್ ಸುವರ್ಣ, ಭಾಗೀರಥಿ ಮುರುಳ್ಯ, ಹುಲ್ಲಳ್ಳಿ ಸುರೇಶ್, ಸಿಮೆಂಟ್ ಮಂಜು, ಟಿ.ಎ. ಶ್ರೀವತ್ಸ, ಧೀರಜ್ ಮುನಿರಾಜು, ಜಗದೀಶ್ ಗುಡಗಂಟಿ, ಡಾ. ಶೈಲೇಂದ್ರ ಬೆಲ್ದಾಳೆ, ಡಾ. ಚಂದ್ರು ಲಮಾಣಿ ಹಾಗೂ ಚೆನ್ನಬಸಪ್ಪ ಗೆದ್ದು ಬೀಗಿದ ಹೊಸ ಮುಖಗಳು.