ಜೈಪುರ: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದರ ಅಡ್ಡಪರಿಣಾಮ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಶಾಸಕರೊಬ್ಬರ ಉಚ್ಚಾಟನೆಗೆ ಕಾರಣವಾಗಿತ್ತು. ಇದೀಗ ಬಿಜೆಪಿಯವರಿಗೂ ಆ ಅಡ್ಡ ಪರಿಣಾಮ ತಟ್ಟಿದ್ದು, ಭಾರತೀಯ ಜನತಾ ಪಕ್ಷ ತನ್ನ ಶಾಸಕಿಯೊಬ್ಬರನ್ನು ಉಚ್ಚಾಟನೆ ಮಾಡಿದೆ.
ಅಡ್ಡಮತ ಚಲಾಯಿಸಿದ್ದಕ್ಕೆ ಹರಿಯಾಣದ ಅದಂಪುರ ಕ್ಷೇತ್ರದ ಶಾಸಕ ಕುಲದೀಪ್ ಬಿಷ್ಣೊಯ್ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತ ಸೇರಿದಂತೆ ಪಕ್ಷದ ಎಲ್ಲ ಸ್ಥಾನಗಳಿಂದಲೂ ಉಚ್ಚಾಟನೆ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆದೇಶ ಹೊರಡಿಸಿದ್ದರು. ಇವರು ಕಾಂಗ್ರೆಸ್ನ ಅಜಯ ಮಾಕೆನ್ ಅವರಿಗೆ ಮತ ಚಲಾಯಿಸುವ ಬದಲು ಬಿಜೆಪಿಯ ಅಭ್ಯರ್ಥಿಗೆ ಅಡ್ಡಮತದಾನ ಮಾಡಿದ್ದರು.
ರಾಜ್ಯಸಭೆಯ ಚುನಾವಣೆಯ ಅಡ್ಡಮತದಾನ ಹಿನ್ನೆಲೆಯಲ್ಲಿ ರಾಜಸ್ಥಾನದ ಶಾಸಕಿ ಶೋಭಾರಾರಣಿ ಕುಷ್ವಾ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿದೆ. ನಿಮ್ಮನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದಿಂದ ಉಚ್ಚಾಟಿಸಲಾಗಿದೆ ಹಾಗೂ ಪಕ್ಷ ನೀಡಿದ್ದ ಎಲ್ಲ ಜವಾಬ್ದಾರಿಗಳನ್ನು ಹಿಂಪಡೆದುಕೊಳ್ಳಲಾಗಿದೆ ಎಂದು ಬಿಜೆಪಿ ಕೇಂದ್ರೀಯ ಶಿಸ್ತುಸಮಿತಿ ಕಾರ್ಯದರ್ಶಿ ಓಂ ಪಟ್ನಾಯಕ್ ಪತ್ರಮುಖೇನ ತಿಳಿಸಿದ್ದಾರೆ. ಶಿಸ್ತು ಉಲ್ಲಂಘಿಸಿದ್ದಕ್ಕೆ ಆಕೆಯ ವಿರುದ್ಧ ಪ್ರತ್ಯೇಕ ಕ್ರಮವನ್ನೂ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ತಿವಾರಿ ಪರವಾಗಿ ಶೋಭಾರಾಣಿ ಅಡ್ಡಮತ ಚಲಾಯಿಸಿದ್ದರು. ಈಕೆ ಬಿಎಸ್ಪಿಯ ಮಾಜಿ ಶಾಸಕ ಬಿ.ಎಲ್. ಕುಷ್ವಾ ಅವರ ಪತ್ನಿ. ಇವರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಾಗಿ ಅನರ್ಹಗೊಂಡಿದ್ದರು.
ಕೋವಿಡ್ನಿಂದಾಗಿ ಏನೂ ನೆನಪಿಲ್ಲ; ಇ.ಡಿ. ವಿಚಾರಣೆ ವೇಳೆ ಬಂಧಿತ ಸಚಿವನ ಉತ್ತರ!