ಮೂಡಿಗೆರೆ: ಬಿದರಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಇಂಟರ್ನೆಟ್ ಸಮಸ್ಯೆಯಿಂದ ಕೂಲಿ ಕಾರ್ವಿುಕರು ಪಡಿತರ ಪಡೆಯಲು ಸಾಧ್ಯವಾಗದಂತಾಗಿದೆ.
ಬಿದರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಕೂಲಿ, ಕಾರ್ವಿುಕರು ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ತೆರಳಿ ಬಯೋಮೆಟ್ರಿಕ್ ನೀಡಬೇಕು. ಆದರೆ ಇಂಟರ್ನೆಟ್ ಸಮಸ್ಯೆಯಿಂದ ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಸತಾಯಿಸಲಾಗುತ್ತಿದೆ. ಕೆಂಜಿಗೆ ಗ್ರಾಮದ ಕೂಲಿ ಕಾರ್ವಿುಕರು ಬಿದರಹಳ್ಳಿಗೆ ತೆರಳಲು 15 ಕಿಮೀ ಪ್ರಯಾಣಿಸಬೇಕು. ಕೆಂಜಿಗೆಯಿಂದ ಮೂಡಿಗೆರೆಗೆ ಬಂದು ಅಲ್ಲಿಂದ ಮತ್ತೆ ಬಿದರಹಳ್ಳಿಗೆ ಬರಲು ಕನಿಷ್ಠ 80 ರೂ. ಬೇಕು. ಅಲ್ಲದೇ ದಿನದ ಕೂಲಿ ಕೆಲಸ ಬಿಟ್ಟು ನ್ಯಾಯಬೆಲೆ ಅಂಗಡಿಗೆ ತೆರಳಿದರೆ ಇಂಟರ್ನೆಟ್ ಸಮಸ್ಯೆಯಿದೆ ಎಂದು ವಾಪಸ್ ಕಳಿಸಲಾಗುತ್ತಿದೆ. ಕೆಲವು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕಾದು ವಾಪಸ್ ಹೋಗುವಂತಾಗಿದೆ.
ಕರೊನಾದಿಂದ ಬಯೋಮೆಟ್ರಿಕ್ ಪಡೆಯದಂತೆ ಸೂಚಿಸಿದರೂ ಇಲ್ಲಿನ ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಬಯೋಮೆಟ್ರಿಕ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಇಂಟರ್ನೆಟ್ ಸಮಸ್ಯೆ ಎದುರಾದಾಗ ಬದಲಿ ವ್ಯವಸ್ಥೆ ಮೂಲಕ ಪಡಿತರ ವಿತರಣೆಗೆ ಮುಂದಾಗಬೇಕು ಎಂದು ಬಿದರಹಳ್ಳಿ ಗ್ರಾಪಂ ಸದಸ್ಯ ಸಚಿನ್ ಒತ್ತಾಯಿಸಿದ್ದಾರೆ.